ಧಾರವಾಡ: ಸಸ್ಯ ಸಂಪತ್ತಿನ ಅರಿವಷ್ಟೇ ಅಲ್ಲದೆ ಅದರ ದಾಖಲೀಕರಣವೂ ಆಗಬೇಕು ಎನ್ನುವ ಉದ್ದೇಶದಿಂದ ಅರಣ್ಯ ಇಲಾಖೆ ದಂಪತಿ ಅಧಿಕಾರಿಗಳಿಬ್ಬರು ಪಣ ತೊಟ್ಟು ಕಪ್ಪತ್ತಗುಡ್ಡದ ಸಸ್ಯಗಳನ್ನು ದಾಖಲೀಕರಣಗೊಳಿಸಿದ್ದಾರೆ.
ಧಾರವಾಡದ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಹಾಗೂ ಅವರ ಪತ್ನಿ ಹಾಗೂ ಗುಂಗರಗಟ್ಟಿ ಅರಣ್ಯ ಅಕಾಡೆಮಿ ಜಂಟಿ ನಿರ್ದೇಶಕಿ ಸೋನಲ್ ವೃಷ್ಣಿ ಅವರು ಈ ಮಹತ್ವದ ಕಾರ್ಯ ಮಾಡಿದ್ದಾರೆ. ಅರಣ್ಯದಲ್ಲಿನ ಬಗೆ ಬಗೆಯ ಸಂಪತ್ತು ಉಳಿಯಬೇಕು ಹಾಗೂ ಸಸ್ಯಗಳ ಮಾಹಿತಿ ನೀಡುವ ಧ್ಯೇಯದೊಂದಿಗೆ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿನ ಔಷಧಿ ಸಸ್ಯಗಳನ್ನು ದಾಖಲೀಕರಣಗೊಳಿಸಿದ್ದಾರೆ.
ಕಪ್ಪತ್ತಗುಡ್ಡದ 375 ಔಷಧಿ ಸಸ್ಯಗಳ ಸಮಗ್ರ ಮಾಹಿತಿ ಸಂಗ್ರಹಿಸಿಕೊಂಡು 'ಕಪ್ಪತ್ತಗುಡ್ಡ' (ಗದಗ ಔಷಧೀಯ ಸಸ್ಯಗಳ ಒಂದು ಸಂಗ್ರಹ) ಎಂಬ ಪುಸ್ತಕ ಬರೆದು ಸಿದ್ಧಪಡಿಸಿದ್ದಾರೆ. ಈ ಪುಸ್ತಕ ಔಷಧೀಯ ಸಸ್ಯಗಳ ಸಂತತಿ ಸೇರಿದಂತೆ ಅವುಗಳ ಕುರಿತು ಸಮಗ್ರ ಮಾಹಿತಿಯಿಂದ ಕೂಡಿದೆ.
ಐಎಫ್ಎಸ್ನ 2011 ನೇ ಬ್ಯಾಚ್ನ ಈ ದಂಪತಿಗಳು ಗದಗ ಜಿಲ್ಲೆಯ ಅರಣ್ಯ ಇಲಾಖೆಯಲ್ಲಿ ಉಪ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಂದಿನ ಸಂದರ್ಭದಲ್ಲಿ ನಡೆದ ಆಂದೋಲನದಿಂದ ಸ್ಫೂರ್ತಿ ಪಡೆದುಕೊಂಡು ಔಷಧೀಯ ಸಸ್ಯಗಳ ಕುರಿತು ಅಧ್ಯಯನ ಮಾಡಿದ್ದಾರೆ. 2015 ರಿಂದ ಕಾರ್ಯ ಪ್ರವೃತ್ತರಾದ ದಂಪತಿ 6 ವರ್ಷಗಳ ಕಾಲ ಅಧ್ಯಯನ ಮಾಡಿ 428 ಪುಟಗಳ ಪುಸ್ತಕ ಹೊರತಂದಿದ್ದಾರೆ.
ಈ ಪುಸ್ತಕ ಇದೇ ತಿಂಗಳ 24 ರಂದು ಬಿಡುಗಡೆಯಾಗುತ್ತಿದೆ. ವಿಶೇಷವೆಂದ್ರೆ, ಪುಸ್ತಕ ಮಾರಾಟ ಮಾಡದೇ ಜನರಿಗೆ ಉಚಿತವಾಗಿ ನೀಡಿ, ಔಷಧ ಸಸ್ಯಗಳ ಮಾಹಿತಿ ನೀಡುವುದೇ ಈ ದಂಪತಿಗಳ ಆಶಯವಾಗಿದೆ.