ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ಗಾಗಿ ಮಾಜಿ ಶಾಸಕ ಎಸ್. ಐ ಚಿಕ್ಕನಗೌಡರ ಹಾಗೂ ಎಂ. ಆರ್ ಪಾಟೀಲ್ ನಡುವೆ ಭಾರಿ ಪೈಪೋಟಿ ಇದೆ. ಆದರೆ, ಟಿಕೆಟ್ ಕೈತಪ್ಪುವ ಮುನ್ಸೂಚನೆ ಸಿಗುತ್ತಿದ್ದಂತೆ ಎಂ.ಆರ್ ಪಾಟೀಲ್ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ.
ಎಂ. ಆರ್ ಪಾಟೀಲ್, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಯಾರ ಕೈಗೂ ಸಿಗದೆ ಇರುವುದು ಕುತೂಹಲ ಕೆರಳಿಸಿದೆ. ಪಾಟೀಲ್ ನಡೆ ಇನ್ನೂ ನಿಗೂಢವಾಗಿದ್ದು, ತಮಗೆ ಟಿಕೆಟ್ ಕೈ ತಪ್ಪಿದ್ರೇ, ಬಂಡಾಯದ ಬಾವುಟ ಹಾರಿಸ್ತಾರೆ ಎನ್ನಲಾಗುತ್ತಿದೆ. 2018ರ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಎಂ. ಆರ್ ಪಾಟೀಲ್ ಬೇಸರಗೊಂಡಿದ್ದರು. ಹೀಗಾಗಿ ಈ ಬಾರಿಯೂ ಕೂಡ ಕುಂದಗೋಳ ಟಿಕೆಟ್ ಹಂಚಿಕೆ ಬಿಜೆಪಿ ಹೈಕಮಾಂಡ್ಗೆ ತಲೆನೋವಾಗಿದೆ. ಎಂ. ಆರ್ ಪಾಟೀಲ್ ನಡೆಯಿಂದ ಈವರೆಗೂ ಬಿಜೆಪಿ ಹೈಕಮಾಂಡ್ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಲು ಹಿಂದೇಟು ಹಾಕುತ್ತಿದೆ. ಪಾಟೀಲ್ಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಡ ಹಾಕುತ್ತಿದ್ದಾರೆ. ಎಂ.ಆರ್ ಪಾಟೀಲ್ ಅವರನ್ನು ಮನವೊಲಿಸಲು ಬಿಜೆಪಿ ಯಶಸ್ವಿಯಾಗುತ್ತಾ ಎಂಬುದು ಕುತೂಹಲ ಮೂಡಿಸಿದೆ.