ಧಾರವಾಡ/ಹುಬ್ಬಳ್ಳಿ/ರಾಮನಗರ : ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ರಾಮನಗರ ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರಾದ ಡಿ ಕೆ ಸಹೋದರರ ಮೇಲೆ ಕ್ರಮಕೈಗೊಳ್ಳುವಂತೆ ಬಿಜೆಪಿ ಪ್ರತಿಭಟನೆ ನಡೆಸಿತು. ಹಾಗೆಯೇ ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರು ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರ ಹಾಕಿದರು.
ಸಿಎಂ ಇರುವ ವೇದಿಕೆಯಲ್ಲೇ ಸಂಸದ ಡಿ.ಕೆ.ಸುರೇಶ್ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆಂದು ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಧಾರವಾಡ, ಹುಬ್ಬಳ್ಳಿಯಲ್ಲೂ ಪ್ರತಿಭಟನೆ:
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಡಿಕೆ ಸಹೋದರರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಅವರು ಏಕಾಏಕಿ ರೌಡಿ ರೀತಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದರು. ಹೀಗೆ ವರ್ತಿಸಿದವರ ವಿರುದ್ಧ ರಾಜ್ಯಪಾಲರು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
(ಇದನ್ನೂ ಓದಿ: VIDEO: ಸಿಎಂ ಎದುರೇ ಸಚಿವ ಅಶ್ವತ್ಥ ನಾರಾಯಣ - ಸಂಸದ ಡಿಕೆ ಸುರೇಶ್ ಜಟಾಪಟಿ..ವೇದಿಕೆಯಲ್ಲೇ ಬೆಂಬಲಿಗರ ಬಿಗ್ ಫೈಟ್!)
ಹುಬ್ಬಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ನಡೆಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತನಾಡಿದರು. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಘೋಷಣೆ ಯಾರು ಕೂಗ್ತಿದ್ದೀರಾ ಆ ಗಂಡಸು ಬನ್ನಿ ಎಂದು ಅಶ್ವತ್ಥ್ ನಾರಾಯಣ್ ಕರೆದಿದ್ದಾರೆ ಹೊರತು ಯಾರ ಹೆಸರನ್ನೂ ಹೇಳಿಲ್ಲ.
ಯಾವುದೇ ರೌಡಿಸಂ ನಡೆಯುವುದಿಲ್ಲ, ಡಿಕೆ ಸುರೇಶ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಎಂದು ಕೂಗಿದರೆ ಇದು ಪೂರ್ವನಿಯೋಜಿತ ಅಲ್ಲವೇ? ಕೂಡಲೇ ಡಿ.ಕೆ. ಸುರೇಶ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ : ಇನ್ನು ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಡಿಕೆ ಸುರೇಶ್ ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು
ರಾಮನಗರದಲ್ಲಿ ಸೋಮವಾರ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಮತ್ತು ಸಚಿವ ಅಶ್ವತ್ಥ್ ನಾರಾಯಣ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು. ಸಿಎಂ ಇದ್ದ ವೇದಿಕೆ ಮೇಲೆಯೇ ಈ ಘಟನೆ ನಡೆದಿತ್ತು. ಇದಕ್ಕೀಗ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
(ಇದನ್ನೂ ಓದಿ: ಸಚಿವ ಅಶ್ವತ್ಥ್ ನಾರಾಯಣ ಭಾಷಣಕ್ಕೆ ಅಡ್ಡಿಪಡಿಸಿದ ಅಭಿಮಾನಿಗಳ ಗದರಿದ ಡಿ.ಕೆ.ಸುರೇಶ್)