ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳ, ವೃದ್ಧರ ಮೇಲೆ ದಾಳಿಗಳಂತ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ. ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಿ ಕಡಿವಾಣ ಹಾಕಲು ಮುಂದಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಜನಪ್ರತಿನಿಧಿಗಳು ಯೋಜನೆಯ ಹಣದಲ್ಲಿ ಗೋಲ್ಮಾಲ್ ನಡೆಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ದಾವಣಗೆರೆಯ ಹಳೆ ನಗರ ಪ್ರದೇಶದ ಬಾಷಾನಗರ, ಆಜಾದ್ ನಗರ, ಮಿಲ್ಲತ್ ಕಾಲೋನಿ, ಮಂಡಕ್ಕಿ ಬಟ್ಟಿ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆ ಕೂಡಾ ಇದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಮಕ್ಕಳನ್ನು ಟಾರ್ಗೆಟ್ ಮಾಡಿರುವ ಬೀದಿ ನಾಯಿಗಳು ನಿರಂತರವಾಗಿ ದಾಳಿ ಮಾಡುತ್ತಿವೆ. ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಚಿಕಿತ್ಸೆ ನಡೆಸಲು ಟೆಂಡರ್ ಕರೆದು 50 ಲಕ್ಷ ಹಣವನ್ನು ಮೀಸಲಿಡಲಾಗಿದೆ. ಇದರಲ್ಲಿ ಕೆಲ ಜನಪ್ರತಿನಿಧಿಗಳು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕರು ಆರೋಪ ಮಾಡುತ್ತಿದ್ದಾರೆ.
ದಾವಣಗೆರೆ ನಗರದಲ್ಲೇ 20 ಸಾವಿರ ಬೀದಿ ನಾಯಿಗಳಿಗೆ ಎಂದು ಅಂದಾಜಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಬೀದಿನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ಈಗಾಗಲೇ 25 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ. ಆದರೂ, ಬೀದಿ ನಾಯಿಗಳ ಕಾಟ ಕಡಿಮೆಯಾಗಿಲ್ಲ. ಒಂದು ನಾಯಿಗೆ ಸಂತಾನಹರಣ ಚಿಕಿತ್ಸೆಗಾಗಿ 800 ರೂಪಾಯಿ ಖರ್ಚು ಮಾಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. 50 ಲಕ್ಷದಲ್ಲಿ 25 ಲಕ್ಷ ರೂಪಾಯಿ ಅನುದಾನ ವೆಚ್ಚ ಮಾಡಿದ್ರೂ ಬೀದಿ ನಾಯಿಗಳ ಸಂಖ್ಯೆಯಲ್ಲಿ ಯಾವುದೇ ನಿಯಂತ್ರಣ ಕಂಡು ಬಂದಿಲ್ಲ ಎಂದು ವಿಪಕ್ಷಗಳು ಕಿಡಿಕಾರಿವೆ.
ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಪ್ರತಿಕ್ರಿಯಿಸಿ, ಟೆಂಡರ್ ಅನ್ನು ಈಗ ಕರೆಯಲಾಗಿದೆ. ಇನ್ನು ಸಂತಾನಹರಣ ಚಿಕಿತ್ಸೆ ಕೈಗೆತ್ತಿಕೊಂಡಿಲ್ಲ. ಹೇಗೆ ಗೋಲ್ ಮಾಲ್ ಮಾಡಲು ಬರುತ್ತೆ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.
ದಾವಣಗೆರೆ ಸ್ಮಾರ್ಟ್ ನಗರವಾಗುವತ್ತ ವೇಗವಾಗಿ ದಾಪುಗಾಲಿಕ್ಕುತ್ತಿದೆ. ಅದಕ್ಕೆ ಅಗತ್ಯ ಕಾಮಗಾರಿಗಳೂ ಭರದಿಂದ ಸಾಗುತ್ತಿವೆ. ಆದ್ರೆ, ಈವರೆಗೂ ಬೀದಿನಾಯಿ ಹಾಗೂ ಹಂದಿಗಳ ನಿಯಂತ್ರಣ ಮಾಡಲು ಆಗದೇ ಇರುವುದು ಮಹಾನಗರ ಪಾಲಿಕೆಯ ಆಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ.
ಇದನ್ನೂ ಓದಿ: ಜ.26ರಿಂದ ಪೆಟ್ರೋಲ್ ಮೇಲೆ 25ರೂ. ಕಡಿತ.. ಷರತ್ತು ಅನ್ವಯ