ದಾವಣಗೆರೆ : ಸರ್ಕಾರ ಪರಿಶಿಷ್ಟ ವರ್ಗದ ಮಕ್ಕಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅ ಯೋಜನೆಗಳ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯವೂ ಒಂದು. ಇಲ್ಲೊಬ್ಬ ವಾರ್ಡನ್ ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚು ತೋರಿಸಿ ಸರ್ಕಾರಿ ಅನುದಾನವನ್ನು ಸ್ವಾಹ ಮಾಡುತ್ತಿದ್ದ ಪ್ರಕರಣವನ್ನು ತಹಶೀಲ್ದಾರ್ ಬಯಲಿಗೆಳೆದಿದ್ದಾರೆ.
ಜಿಲ್ಲೆ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಮೇಲೆ ಚನ್ನಗಿರಿ ತಹಶೀಲ್ದಾರ್ ಪಟ್ಟರಾಜ ಗೌಡ ಅವರು ದಿಢೀರ್ ದಾಳಿ ಮಾಡಿ ಅಕ್ರಮ ಬಯಲಿಗೆ ತಂದಿದ್ದಾರೆ. ಕೆರೆಬಿಳಚಿ ಗ್ರಾಮದಲ್ಲಿರುವ ಬಾಲಕಿಯರ ಹಾಸ್ಟೆಲ್ನಲ್ಲಿ 35 ವಿದ್ಯಾರ್ಥಿನಿಯರು ನೋಂದಣಿಯಾಗಿದ್ದರು. ಆದ್ರೇ ಆಘಾತಕಾರಿ ವಿಚಾರ ಏನಂದ್ರೇ ಅ ಹಾಸ್ಟೆಲ್ನಲ್ಲಿದ್ದಿದ್ದು ಕೇವಲ 4 ವಿದ್ಯಾರ್ಥಿನಿಯರು ಮಾತ್ರ. ಹಾಸ್ಟೆಲ್ನ ವಾರ್ಡನ್ ಹಾಗೂ ಸಿಬ್ಬಂದಿ ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಬಂದ ಅನುದಾನ ಎಲ್ಲಾ ಗುಳುಂ ಮಾಡಿದ್ದಾರೆ.
35 ವಿದ್ಯಾರ್ಥಿನಿಯರ ಹಾಜರಾತಿ ತೋರಿಸಿ ಅವರಿಗೆ ನೀಡುತ್ತಿದ್ದ ಅನುದಾನವನ್ನು ಸ್ವಾಹ ಮಾಡಿದ್ದಾರೆ. ಸತತ ಮೂರು ವರ್ಷಗಳಿಂದ ಇದೇ ಚಾಳಿ ಮುಂದುವರೆಸುತ್ತಿದ್ದಾರೆ ಎಂಬುದು ವಿದ್ಯಾರ್ಥಿನಿಯರ ಹಾಗೂ ಸ್ಥಳೀಯ ನಿವಾಸಿಗಳ ಆರೋಪವಾಗಿದೆ. ಮಾಹಿತಿ ಪಡೆದು ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರ್ ಪಟ್ಟರಾಜ ಗೌಡ ನೇತೃತ್ವದ ತಂಡ ಅಲ್ಲಿರುವ ಅವ್ಯವಸ್ಥೆ ಕಂಡು ದಂಗಾಗಿದ್ರು.
ಸ್ಥಳೀಯ ನಾಗರಿಕರ ದೂರಿನ ಅನ್ವಯ ಚನ್ನಗಿರಿ ತಹಶೀಲ್ದಾರ್ ಪಟ್ಟರಾಜ ಗೌಡ ನೇತೃತ್ವದಲ್ಲಿ ಪಿಎಸ್ಐ ಶಿವರುದ್ರಪ್ಪ ಮೇಟಿ, ಪಿಡಿಇ ಚಂದ್ರಪ್ಪ ಹಾಗೂ ಸಿಬ್ಬಂದಿ ತಂಡ ಹಾಸ್ಟೆಲ್ಗೆ ದಿಢೀರ್ ಭೇಟಿ ನೀಡ್ತು. ಹಾಸ್ಟೆಲ್ನಲ್ಲಿದ್ದ ಅವ್ಯವಸ್ಥೆ, ಸ್ವಚ್ಛತೆ ಕೊರತೆ, ಪಡಿತರ, ತರಕಾರಿ ದಾಸ್ತಾನಿನಲ್ಲಿ ಕಡಿಮೆ ಹಾಗೂ ಕಳಪೆತನ ಮೇಲ್ನೋಟಕ್ಕೆ ಕಂಡು ಬಂದಿದೆ. ಇದೇ, ಸಂದರ್ಭದಲ್ಲಿ ವಾರ್ಡ್ನ ಆಸ್ಮಾ ಪರ್ವೀನ್ ಕರ್ತವ್ಯಕ್ಕೆ ಗೈರಾಗಿದ್ದರು.
ವಿದ್ಯಾರ್ಥಿನಿಯರ ಹಾಸ್ಟೆಲ್ ವಾರ್ಡನ್ ಅಕ್ರಮ : ಅವರ ಮೊಬೈಲ್ ಮೂಲಕ ಸಂಪರ್ಕಿಸಿದಾಗ, ತರಕಾರಿ ಖರೀದಿಗೆ ದಾವಣಗೆರೆಗೆ ಹೋಗಿರುವುದಾಗಿ ಸಬೂಬು ಹೇಳಿದ್ರು. ಕಡತ ಹಾಗೂ ಉಗ್ರಾಣದಲ್ಲಿರುವ ದಾಸ್ತಾನು ಪರಿಶೀಲನೆಗೆ ಕೀಲಿಕೈ ದೊರೆಯಲಿಲ್ಲ. ಮೇಲ್ನೋಟಕ್ಕೆ ದೊಡ್ಡ ಪ್ರಮಾಣದ ಅಕ್ರಮ ಸ್ಪಷ್ಟವಾಗಿತ್ತು. ತಹಶೀಲ್ದಾರ್ ಅವರು ನೀಡಿದ ವರದಿ ಈವರೆಗೆ ತಮ್ಮ ಕೈ ಸೇರಿಲ್ಲ. ವರದಿ ಆಧರಿಸಿ, ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ವಾರ್ಡ್ನ್ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಜಿ. ಕೌಸರ್ ರೇಷ್ಮಾ ಸ್ಪಷ್ಟನೆ ನೀಡಿದರು.
ಒಟ್ಟಾರೆಯಾಗಿ, ಸಮಾಜ ಕಲ್ಯಾಣ ಇಲಾಖೆ ಕೆಲವು ಅಧಿಕಾರಿಗಳು ಪರಿಶಿಷ್ಠರ ಅಭಿವೃದ್ಧಿಗೆಂದು ಸರ್ಕಾರ ನೀಡಿದ ಅನುದಾನವನ್ನೂ ಬಿಡದೇ ಮುಕ್ಕುತ್ತಿದ್ದಾರೆ. ಇನ್ನಾದ್ರೂ ಅಂಥ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನುಕ್ರಮ ಜರುಗಿಸುತ್ತಾ ಎಂಬುದು ಕಾದು ನೋಡಬೇಕಾಗಿದೆ.