ದೊಡ್ಡಬಳ್ಳಾಪುರ(ಬೆಂಗಳೂರು) : ಐಐಎಸ್ ಮಾಡುವ ಕನಸನ್ನು ಆ ಯುವಕ ಕಂಡಿದ್ದನು. ಈಗಾಗಲೇ ಯುಪಿಎಸ್ ಪ್ರಿಲಿಮ್ಸ್ ಪರೀಕ್ಷೆ ಬರೆದಿದ್ದ ಆತ ಮುಖ್ಯ ಪರೀಕ್ಷೆಗೆ ತಯಾರಿಸಿ ನಡೆಸುತ್ತಿದ್ದ. ಆದರೆ ವೈದ್ಯರು ಎಡವಟ್ಟು ಮಾಡಿದ್ದರಿಂದ ತಮ್ಮ ಮಗ ಆಸ್ಪತ್ರೆಗೆ ದಾಖಲಾಗುವಂತಾಗಿದೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ.
ದೊಡ್ಡಬಳ್ಳಾಪುರ ನಗರದ ತಿಪ್ಪಾಪುರ ರಸ್ತೆಯ ನಿವಾಸಿ ಗಂಗರಾಜ ಶಿರವಾರ ಪುತ್ರ ಜಿ.ನಾಗೇಂದ್ರ ಕಳೆದ 12 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಜಾಂಡಿಸ್ ಕಾಯಿಲೆಯ ಲಕ್ಷಣಗಳು ಕಂಡು ಬಂದ ಹಿನ್ನೆಲೆ ವೀರಭದ್ರಪಾಳ್ಯದ ಮನೆಯಲ್ಲೇ ಕ್ಲಿನಿಕ್ ಇಟ್ಟುಕೊಂಡಿರುವ ವ್ಯದ್ಯರೊಬ್ಬರ ಬಳಿ ಚಿಕಿತ್ಸೆಗಾಗಿ ಹೋಗಿದ್ದರು. ಆ ಯುವಕನಿಗೆ ವೈದ್ಯರು ಚುಚ್ಚುಮದ್ದು ನೀಡಿ ಮಾತ್ರೆ ಕೊಟ್ಟು ಕಳುಹಿಸಿದ್ದಾರೆ. ಆದರೆ, ಇಂಜೆಕ್ಷನ್ ನೀಡಿದ ಜಾಗದಲ್ಲಿ ಊತ ಕಾಣಿಸಿಕೊಂಡಿದೆ. ತಕ್ಷಣ ವೈದ್ಯರಿಗೆ ತಿಳಿಸಿದ್ದೇವೆ, ಆದರೆ ಅವರು ಏನೂ ಆಗಲ್ಲ, ನೀರು ತುಂಬಿಕೊಂಡಿದೆ ಎಂದು ಹೇಳಿದ್ದಾರೆ ಎಂದು ಚಿಕಿತ್ಸೆ ಪಡೆದ ಯುಕನ ಮನೆಯವರು ಆರೋಪಿಸಿದ್ದಾರೆ.

ಸಿರೆಂಜ್ನಲ್ಲಿ ನೀರು ಹೊರತೆಗೆದು ಮತ್ತೊಂದು ಇಂಜೆಕ್ಷನ್ ಕೊಟ್ಟು ಗ್ಲೂಕೋಸ್ ಹಾಕಿದ್ದಾರೆ. ಆದರೆ, ಆ ಯುವಕನಿಗೆ ಊತ ಹಾಗೂ ನೋವು ಕಡಿಮೆಯಾಗಿಲ್ಲ. ಗಾಬರಿಯಾದ ಪೋಷಕರು ನಾಗೇಂದ್ರನನ್ನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಚುಚ್ಚುಮದ್ದು ನೀಡಿದ ಜಾಗದಲ್ಲಿ ಮಾಂಸ ಕೊಳೆತು ದುರ್ಮಾಂಸ ಬೆಳೆದಿತ್ತು ಎನ್ನುವುದು ಕುಟುಂಬದವರ ಹೇಳಿಕೆಯಾಗಿದೆ.
ಗಾಯದ ತೀವ್ರತೆ ಅರಿತ ಸರ್ಕಾರಿ ಆಸ್ಪತ್ರೆ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ದುರ್ಮಾಂಸ ತೆಗೆದಿದ್ದಾರೆ. 11ದಿನಗಳಿಂದ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಮೊದಲಿನಂತೆ ಆಗಲು ಇನ್ನೂ 15 ದಿನಗಳು ಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಯುವಕನ ಕುಟುಂಬದವರು ಹೇಳಿದ್ದಾರೆ.
ಮಗನಿಗೆ ಆಗಿರುವ ಸಮಸ್ಯೆ ಬಗ್ಗೆ ಮಾತನಾಡಲು ಮೊದಲು ಚಿಕಿತ್ಸೆ ನೀಡಿದ ವೈದ್ಯರ ಬಳಿ ಹೋದಾಗ ಜಾತಿ ನಿಂದನೆ, ಬೆದರಿಕೆ ಹಾಕಿದ್ದಾಗಿ ಯುವಕನ ಮನೆಯವರು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಓದಿ: ಐಎಎಸ್ ಪರೀಕ್ಷೆ: ಕನ್ನಡದಲ್ಲೂ ಬರೆಯಬಹುದು, ಪಾಸಾಗಬಹುದು: ಅಪೂರ್ವ ಬಾಸೂರು