ಬೆಂಗಳೂರು: ವಿಕಲಚೇತನೆಯ ಸೋಗಿನಲ್ಲಿ ರಾತ್ರೋರಾತ್ರಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಮನೆಗಳ್ಳಿಯನ್ನು ತಲಘಟ್ಟಪುರ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಮಂಜುಶ್ರೀ (45) ಬಂಧಿತ ಆರೋಪಿ. ಈಕೆಯಿಂದ 27 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮಮೂರ್ತಿ ನಗರದ ನಿವಾಸಿಯಾದ ಈಕೆ 16 ನೇ ವಯಸ್ಸಿನಲ್ಲೇ ಪ್ರೀತಿಸಿ ಉಮೇಶ್ ಎಂಬಾತನನ್ನು ವಿವಾಹವಾಗಿದ್ದಳು. ಕೌಟುಂಬಿಕ ಕಲಹದ ಹಿನ್ನೆಲೆ ಐದು ವರ್ಷಗಳ ಹಿಂದೆ ಗಂಡನನ್ನು ತೊರೆದು, ಇಬ್ಬರು ಹೆಣ್ಣು ಮಕ್ಕಳನ್ನು ಟ್ರಸ್ಟ್ ವೊಂದರಲ್ಲಿ ಬಿಟ್ಟಿದ್ದಾಳೆ.
ಜೀವನೋಪಾಯಕ್ಕಾಗಿ ಕೆ.ಆರ್.ಪುರ ಮಾರ್ಕೆಟ್ನಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದಳು. ಆದರೆ ನ್ಯಾಯಯುತ ಹಣ ಸಂಪಾದನೆಯಿಂದ ಐಷಾರಾಮಿ ಜೀವನ ನಡೆಸಲು ಸಾಧ್ಯವಾಗದ ಹಿನ್ನೆಲೆ ಕಳ್ಳತನದ ದಾರಿ ಹಿಡಿದಿದ್ದಳು ಎನ್ನಲಾಗ್ತಿದೆ. ಮೊದಲು ಕಾರಿನಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದಳು. ಟಾರ್ಗೆಟ್ ಮಾಡಿಕೊಂಡಿದ್ದ ಮನೆಯಿಂದ ಸ್ವಲ್ಪ ದೂರದಲ್ಲೇ ಕಾರು ನಿಲ್ಲಿಸಿ ವಿಕಲಚೇತನೆಯ ರೀತಿ ಕುಂಟುತ್ತಾ ಬರುತ್ತಿದ್ದಳು. ನಂತರ ಮನೆಯ ಬೀಗ ಓಪನ್ ಮಾಡಿ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.