ಬೆಂಗಳೂರು: ಜಲಸಂಪನ್ಮೂಲ ಇಲಾಖೆಯಲ್ಲಿನ ಸಣ್ಣ ಕಾಮಗಾರಿಗಳ ಪ್ಯಾಕೇಜ್ ಪದ್ಧತಿಯನ್ನು ರದ್ದುಗೊಳಿಸುವಂತೆ ಸಣ್ಣ ಗುತ್ತಿಗೆದಾರರು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದಾರೆ. ತಮ್ಮ ಮನವಿ ಪತ್ರದಲ್ಲಿ ಸಣ್ಣ ಕಾಮಗಾರಿಗಳನ್ನು ಪ್ಯಾಕೇಜ್ಗಳಾಗಿ ಮಾಡಿ ಹಣ ಮಾಡುವ ಉದ್ದೇಶವನ್ನು ದೊಡ್ಡ ಗುತ್ತಿಗೆದಾರರು ಹೊಂದಿರುತ್ತಾರೆ. ಆದ್ದರಿಂದ ಪ್ಯಾಕೇಜ್ ಪದ್ಧತಿಯನ್ನು ರದ್ದು ಮಾಡಿ ನಮ್ಮಂತಹ ಸಣ್ಣ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಪ್ಯಾಕೇಜ್ ಪದ್ಧತಿಯನ್ನು ರದ್ದುಪಡಿಸದೇ ಹೋದಲ್ಲಿ ನೊಂದ ಗುತ್ತಿಗೆದಾರರು ಉಗ್ರ ಸ್ವರೂಪದ ಹೋರಾಟ ನಡೆಸಲಿದ್ದಾರೆ. ಆ ಸಮಯದಲ್ಲಿ ಆಗುವ ಎಲ್ಲ ಅನಾಹುತಗಳಿಗೆ ತಾವೇ ಹೊಣೆಗಾರರು ಆಗುತ್ತೀರಿ ಎಂದು ಸಣ್ಣ ಗುತ್ತಿಗೆದಾರರು ಎಚ್ಚರಿಕೆ ರವಾನಿಸಿದ್ದಾರೆ.
ನಾವು ಸಣ್ಣ ಗುತ್ತಿಗೆದಾರರು, ಜಲ ಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಥಣಿ ವಿಭಾಗ (R&R) ಮತ್ತು HBC ಯಲ್ಲಿ ಕರೆದ ಹೊಲಗಾಲುವೆ (ಎಫ್ಐಸಿ) ಕಾಮಗಾರಿಗಳ ಟೆಂಡರಗಳಿಗೆ ಸಾಲ ಸೂಲ ಮಾಡಿ ಟೆಂಡರ್ ಅರ್ಜಿ ಶುಲ್ಕ ಹಾಗೂ ಇಎಂಡಿ ಹಣವನ್ನು ಕಟ್ಟಿರುತ್ತೇವೆ. ಈಗ ಜಲಸಂಪನ್ಮೂಲ ಸಚಿವರು, ಸಣ್ಣ ಕಾಮಗಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಈ ಎಲ್ಲಾ ಸಣ್ಣ ಕಾಮಗಾರಿಗಳನ್ನು ಪ್ಯಾಕೇಜ್ ಮಾಡಲು ಆದೇಶಿಸಿರುತ್ತಾರೆ ಎಂದು ದೂರಿದ್ದಾರೆ.
ಜಲಸಂಪನ್ಮೂಲ ಸಚಿವರಿಗೂ ಮನವಿ: ಇದೇ ವೇಳೆ ವಿಜಯಪುರದಿಂದ ಬಂದಿದ್ದ ಐದಕ್ಕೂ ಹೆಚ್ಚು ಗುತ್ತಿಗೆದಾರರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ ಬರುವ ಆರ್ ಆ್ಯಂಡ್ ಆರ್ / ಹೆಚ್ ಬಿ ಸಿ (ಹಿಪ್ಪರಗಿ ಬ್ಯಾರೇಜ್ ಕೆನಲ್) ವಿಭಾಗದಲ್ಲಿ ಎಫ್ ಐ ಸಿ ಟೆಂಡರ್ ರದ್ದು ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.
ಈ ಗುತ್ತಿಗೆಗೆ ಈಗಾಗಲೇ ಅರ್ಜಿ ಶುಲ್ಕ ಮತ್ತ ಇ ಎಂ ಡಿ ಹಣ ಕಟ್ಟಿದ್ದರೂ ರದ್ದು ಮಾಡುತ್ತಿದ್ದಾರೆ. ಪ್ಯಾಕೇಜ್ ಮಾಡುತ್ತಿರುವುದರ ಹಿಂದೆ ದೊಡ್ಡ ಗುತ್ತಿಗೆದಾರರಿಗೆ ಕೆಲಸ ನೀಡುವ ಹುನ್ನಾರ ಇದೆ. ಒಟ್ಟು 186 ಕೋಟಿ ರೂಪಾಯಿಯ ಗುತ್ತಿಗೆ ಇದಾಗಿದ್ದು, ಈ ಪೈಕಿ ಎರಡರಿಂದ ನಾಲ್ಕು ಕೋಟಿ ಕೆಲಸ ಹೊಲಗಾಲುವೆ ಕಾಮಗಾರಿಯದ್ದಾಗಿದೆ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಅವರು ಕಾಮಗಾರಿಯನ್ನು ಪ್ಯಾಕೇಜ್ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ. ಈ ಹಿಂದೆ ಎರಡು ಬಾರಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿದ್ದರೂ, ಅವರು ನನ್ನ ಬಳಿ ಏನೂ ಇಲ್ಲ, ಸಿಎಂ ಬಳಿ ಕೇಳಿಎಂದು ಹೇಳಿ ಕಳುಹಿಸಿರುವುದಾಗಿ ಗುತ್ತಿಗೆದಾರರು ದೂರಿದ್ದಾರೆ.
ಪ್ಯಾಕೇಜ್ ಮಾಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದಾಗಿ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕಾರ್ಯಪಾಲಕ ಇಂಜಿನಿಯರ್ ಗೆ ಮತ್ತು ಆರ್ &ಆರ್ ಅಥಣಿ ವಿಭಾಗದವರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.