ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ನಿನ್ನೆ ಮಧ್ಯಾಹ್ನದಿಂದ ಶುರುವಾದ ಜನರ ಆಗಮನ ಇಂದು ರಾತ್ರಿ ಕಳೆದರೂ ಕಡಿಮೆ ಆಗಿಲ್ಲ.
ದೂರದ ಊರಿನಿಂದ ಬಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆದುಕೊಂಡರು. ಇತ್ತ ಜನಸಾಗರವನ್ನ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ನೂಕು ನುಗ್ಗಲು ತಪ್ಪಿಸಲು ಪ್ರಯಾಸಪಡಬೇಕಾಯಿತು.
ಮಳೆ ನಡುವೆಯೂ ಅಭಿಮಾನಿಗಳ ಉತ್ಸಾಹ ಕುಗ್ಗಿರಲಿಲ್ಲ. ತುಂತುರು ಮಳೆಯಲ್ಲೇ ಪಾರ್ಥೀವ ಶರೀರದ ದರ್ಶನ ಮಾಡಿದರು. ಗಣ್ಯಾತಿಗಣ್ಯರ ಆಗಮನದಿಂದಾಗಿ ಅಭಿಮಾನಿಗಳ ಕೂಗಾಟ, ಚೀರಾಟ ಹೆಚ್ಚಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರದಂತಹ ಕೆಲಸ ಮಾಡಬೇಕಾಯಿತು. ಈ ವೇಳೆ ಅಭಿಮಾನಿಗಳು ಕಾಲ್ಕಿತ್ತರು, ಇದರಿಂದಾಗಿ ಸ್ಥಳದಲ್ಲಿ ಚಪ್ಪಲಿಯ ರಾಶಿಯೇ ಕಾಣುತ್ತಿತ್ತು.
ಕಂಠೀರವ ಕ್ರೀಡಾಂಗಣದ ಒಳಗೆ ಹೊರಗೆ ಎಲ್ಲಿ ಕಣ್ಣುಹಾಯಿಸಿದರೂ ರಾಶಿ-ರಾಶಿ ಚಪ್ಪಲಿಗಳು ಬಿದಿದ್ದವು. ಮಲ್ಯ ರೋಡ್ ತುಂಬೆಲ್ಲ ಫುಟ್ ಪಾತ್ನಲ್ಲಿ ಕಸದ ರಾಶಿಯೊಂದಿಗೆ ಸಮನಾಗಿ ಚಪ್ಪಲಿಗಳು ಇದ್ದವು. ಕ್ರೀಡಾಂಗಣದ ಒಳಗೆ ಸುಮಾರು 8 ಗಾಡಿಯಲ್ಲಿ ಲೋಡ್ ಮಾಡಲಾಗಿದೆ ಅಂತಾ ಅಲ್ಲಿದ್ದ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.