ಬೆಂಗಳೂರು: ದ್ರೌಪದಿ ಕರಗ ಅಥವಾ ಬೆಂಗಳೂರು ಕರಗ ರಾಜಧಾನಿಯ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಬ್ಬ. ಚೈತ್ರ ಪೂರ್ಣಿಮಾ ದಿನವಾದ ನಾಡಿದ್ದು ನಡೆಯುವ ಕರಗ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕೋವಿಡ್ ಎರಡನೆಯ ಅಲೆಯ ಕರಿನೆರಳು ಈ ಬಾರಿಯೂ ಉತ್ಸವದ ಮೇಲೆ ಬಿದ್ದಿದ್ದು ಸತತ ಎರಡನೇಯ ವರ್ಷ ಸರಳ ಕರಗ ಮಹೋತ್ಸವ ನಡೆಸಲು, ಪಾಲಿಕೆ, ಜಿಲ್ಲಾಡಳಿತ ಪೊಲೀಸರು ಸಜ್ಜಾಗಿದ್ದಾರೆ. ಕೇವಲ 5 ಕುಟುಂಬಗಳಿಗೆ ಪಾಸ್ ನೀಡಲಾಗಿದ್ದು, ಪಾರಂಪರಿಕವಾಗಿ ವೈನಿಕುಲ ಕ್ಷತ್ರಿಯ/ ತಿಗಳರ ಬೆರಳೆಣಿಕೆಯಷ್ಟು ಕುಟುಂಬಗಳು ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು ಕರಗ ತನ್ನದೇ ಆದ ಧಾರ್ಮಿಕ ಹಿನ್ನೆಲೆ, ಪಾವಿತ್ರ್ಯತೆ ಹೊಂದಿದೆ. 11 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಹೂವಿನ ಕರಗವೇ ಮುಖ್ಯ ಕೇಂದ್ರ ಬಿಂದುವಾಗಿದ್ದು, ತಯಾರಿಗಳು ನಡೆದಿವೆ. ಈಗಾಗಲೇ ಶುರುವಾಗಿರುವ ಬೆಂಗಳೂರು ಕರಗ ಪ್ರಕ್ರಿಯೆ ಏಪ್ರಿಲ್ 27 ರವರೆಗೆ ನಡೆಯಲಿದೆ.
ಐತಿಹಾಸಿಕ ಬೆಂಗಳೂರು ಕರಗ ದೇವರ ರಥೋತ್ಸವ ಮತ್ತು ಧ್ವಜಾರೋಹಣದ ಮೂಲಕ ಪ್ರಾರಂಭವಾಯಿತು. 11 ದಿನಗಳಲ್ಲಿ ಪ್ರತಿದಿನ ಸಂಜೆ 7:30ಕ್ಕೆ ಮಹಾಮಂಗಳಾರತಿ ನಡೆಯುತ್ತದೆ. ಈ ಸಂಬಂಧ ತಿಗಳರ ಪೇಟೆಯಲ್ಲಿರುವ ಧರ್ಮರಾಯ ದೇವಸ್ಥಾನದಲ್ಲಿ ದೀಪೋತ್ಸವ ಕೂಡ ಜರುಗಿತು. ಆದರೆ ಈ ಬಾರಿ ಅತ್ಯಂತ ಸರಳ ಕರಗ ಮಹೋತ್ಸವ ನಡೆಯುತ್ತಿದ್ದು, ಸಾರ್ವಜನಿಕ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಮೊದಲು ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರಗ ಉತ್ಸವವನ್ನು 50-100 ಜನ ಆಚರಣೆಗೆ ಅನುಮತಿ ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಹೊಸ ಮಾರ್ಗಸೂಚಿ, ನೈಟ್, ವೀಕೆಂಡ್ ಕರ್ಫ್ಯೂ ಮಧ್ಯೆ ಅರ್ಚಕರೂ ಸೇರಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಮಾತ್ರ ಅವಕಾಶ ನೀಡಲಾಗಿದೆ.
ಬೆಂಗಳೂರು ಕರಗದ ಹಿನ್ನೆಲೆ:
ದ್ವಾಪರ ಯುಗದಲ್ಲಿ ರಾಕ್ಷಸರ ಪಡೆಗಳನ್ನು ಸದೆಬಡಿಯಲು ದ್ರೌಪದಿ ಜನ್ಮ ತಾಳಿದ್ದಳು ಎಂಬುದು ಇಲ್ಲಿನ ನಂಬಿಕೆ. ಆದರೆ ಪಾಂಡವರು ಕುರುಕ್ಷೇತ್ರ ಕದನ ಮುಗಿಸಿ, ಯುಗ ಸಮಾಪ್ತಿಯಾಗಿ ಸ್ವರ್ಗಕ್ಕೆ ಹಿಂತಿರುಗುವಾಗ ತಿಮಿರಾಸುರ ಅನ್ನೋ ರಾಕ್ಷಸ ಮಾತ್ರ ಬದುಕುಳಿದಿರುತ್ತಾನೆ. ಆಗ ದ್ರೌಪದಿ ತನ್ನ ಬೆವರಿನಿಂದ ವೀರಕುಮಾರರನ್ನು ಸೃಷ್ಟಿ ಮಾಡಿ ತಿಮಿರಾಸುರನನ್ನು ಸಂಹರಿಸುತ್ತಾಳೆ ಅನ್ನೋ ಪ್ರತೀತಿ ಇದೆ.