ಬೆಂಗಳೂರು : ರಾಜ್ಯಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನಮ್ಮ ರಾಜ್ಯಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸುವಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟಿನ ಆದೇಶವನ್ನು ನಾಡಿನ ನೊಂದ ಜನರೆಲ್ಲರ ಪರ ನಾನು ಸ್ವಾಗತಿಸುತ್ತೇನೆ.
ಕರ್ನಾಟಕಕ್ಕೆ ನಿತ್ಯ 1,600 - 1,700 ಮೆಟ್ರಿಕ್ ಟನ್ ಆಮ್ಲಜನಕದ ಅಗತ್ಯವಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನಿಗದಿ ಮಾಡಿದ್ದು 965 ಮೆಟ್ರಿಕ್ ಟನ್ ಮಾತ್ರ.
ಇದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ಪ್ರಾಣ ಕಳೆದುಕೊಳ್ಳಲಿದ್ದ ರಾಜ್ಯದ ಸಹಸ್ರಾರು ರೋಗಿಗಳ ಪ್ರಾಣವನ್ನು ಸುಪ್ರೀಂಕೋರ್ಟ್ ಉಳಿಸಿದೆ ಎಂದು ಬಣ್ಣಿಸಿದ್ದಾರೆ.
ಸುಪ್ರೀಂಕೋರ್ಟ್ ತಪರಾಕಿಯಿಂದ ಪ್ರಧಾನಿ ಈಗಲಾದರೂ ಬುದ್ದಿ ಕಲಿಯಲಿ. ಜನರ ಪ್ರಾಣದ ಜೊತೆ ಚೆಲ್ಲಾಟವಾಡುವ ಕ್ರೌರ್ಯವನ್ನು ನಿಲ್ಲಿಸಲಿ. ಕರ್ನಾಟಕಕ್ಕೆ ಅಗತ್ಯವಿರುವಷ್ಟು ಪ್ರಮಾಣದ ಆಮ್ಲಜನಕವನ್ನು ತಕ್ಷಣ ಪೂರೈಸಲಿ.
ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ನ ಸಂಪೂರ್ಣ ಇಲ್ಲಿಯೇ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಹಾಗೂ ರಾಜ್ಯಕ್ಕೆ ನೀಡುವ ಆಕ್ಸಿಜನ್ ಪ್ರಮಾಣವನ್ನು 1,500 ಮೆಟ್ರಿಕ್ ಟನ್ಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.
ಚುನಾಯಿತ ಸರ್ಕಾರ ಇಲ್ಲವೇ?ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಬೆಂಬಲಿಗರ ದಾಂಧಲೆ ಖಂಡಿಸಿರುವ ಸಿದ್ದರಾಮಯ್ಯ, ಏನಿದು ಮುಖ್ಯಮಂತ್ರಿಗಳೇ? ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೇ? ಇಲ್ಲವೇ ನಿಮ್ಮ ಶಾಸಕರು, ಸಂಸದರು ಮತ್ತು ಅವರ ಬೆಂಬಲಿಗರ ಗೂಂಡಾ ರಾಜ್ಯವೇ? ಬೊಮ್ಮನಹಳ್ಳಿ ವಾರ್ ರೂಮ್ನಲ್ಲಿ ಗೂಂಡಾವರ್ತನೆ ನಡೆಸಿದ್ದ ಶಾಸಕರು ಮತ್ತು ಬೆಂಬಲಿಗರನ್ನು ತಕ್ಷಣ ಬಂಧಿಸಿ.
ಕೊರೊನಾ ವಾರಿಯರ್ಸ್ ಮೇಲಿನ ದೌರ್ಜನ್ಯಕ್ಕೆ ಆರು ತಿಂಗಳಿಂದ ಏಳು ವರ್ಷ ಜೈಲು, ಒಂದು ಲಕ್ಷ ರೂ.ಗಳಿಂದ ಏಳು ಲಕ್ಷ ರೂ. ವರೆಗೆ ದಂಡ ವಿಧಿಸಬಹುದು. ಇದೇ ಕಾಯ್ದೆಯಡಿ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರನ್ನು ತಕ್ಷಣ ಬಂಧಿಸಿ ಎಂದು ಸಲಹೆ ಆಗ್ರಹಿಸಿದ್ದಾರೆ.
ಬಿಜೆಪಿ ಸಂಸದರು/ಶಾಸಕರ ಬೆಡ್ ಬ್ಲಾಕ್ ದಂಧೆ ಕಾರ್ಯಾಚರಣೆಯ ಉದ್ದೇಶ ಬಿಬಿಎಂಪಿ ಭ್ರಷ್ಟಚಾರ ಬಯಲುಗೊಳಿಸುವುದಲ್ಲ, ಅದರ ದುರುದ್ದೇಶ ತಮ್ಮ ಸ್ವಜನಪಕ್ಷಪಾತ ಮತ್ತು ಗೂಂಡಾಗಿರಿಯನ್ನು ಮುಚ್ಚಿಹಾಕುವುದು ಎನ್ನುವುದು ಜಗಜ್ಜಾಹೀರಾಗಿದೆ.
ಮೊದಲು ಇವರನ್ನು ಬಂಧಿಸಿ ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ. ಬಿಜೆಪಿ ಶಾಸಕರು, ಸಂಸದರು ಮತ್ತು ಬೆಂಬಲಿಗರ ದೌರ್ಜನ್ಯ ಮತ್ತು ಬೆದರಿಕೆ ಬಿಬಿಎಂಪಿ ದಕ್ಷಿಣ ವಲಯದ ವಾರ್ ರೂಮ್ಗೆ ಸೀಮಿತವಾದುದಲ್ಲ, ಇದು ನಗರದಾದ್ಯಂತ ನಡೆದಿದೆ. ನಗರದಲ್ಲಿ ಕೊರೊನಾ ಉಲ್ಭಣಿಸಲು ಇವರ ಈ ದುಂಡಾವರ್ತನೆ ಕೂಡ ಕಾರಣ. ಈ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ.
ಕೋಮು ಘರ್ಷಣೆಗೆ ಪ್ರಚೋದನೆ ಕೂಡ ತೇಜಸ್ವಿ ಸೂರ್ಯ ಮತ್ತು ಸಂಗಡಿಗರ ಕಾರ್ಯಾಚರಣೆಯ ದುರುದ್ದೇಶ ಎನ್ನುವುದು ಬಯಲಾಗಿದೆ. ಐಪಿಸಿ ಸೆಕ್ಷನ್ 153ಎ ಅನ್ವಯ ಈ ದುಷ್ಟಕೂಟದ ವಿರುದ್ಧ ಮೊಕದ್ದಮೆ ದಾಖಲಿಸಲು ಸಿಎಂ ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು.
ಬೆಡ್ ಬ್ಲಾಕ್ ದಂದೆ ವಿರುದ್ಧದ ತೇಜಸ್ವಿ ಸೂರ್ಯ ಮತ್ತು ಶಾಸಕರ ನಕಲಿ ಕಾರ್ಯಾಚರಣೆ ಪರೋಕ್ಷವಾಗಿ ನಿಮ್ಮ ವಿರುದ್ಧದ ಕಾರ್ಯಚಾರಣೆಯೂ ಹೌದು. ಬಿಎಸ್ವೈ ಅವರೇ, ಈ ಒಂದು ಪ್ರಕರಣದಲ್ಲಿಯಾದರೂ ಸ್ವಘೋಷಿತ 'ರಾಜಾಹುಲಿ'ಯಂತೆ ನಡೆದುಕೊಳ್ಳಿ, 'ರಾಜಾ ಇಲಿ' ಆಗಬೇಡಿ ಎಂದು ಲೇವಡಿ ಮಾಡಿದ್ದಾರೆ.