ಬೆಂಗಳೂರು: ಬೆಲೆ ಏರಿಕೆ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ಗೆ ಕೇಳಿ ಗೊತ್ತಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತಾದ ಚರ್ಚೆಯಲ್ಲಿ ಮಾತನಾಡುತ್ತಾ, ಜನವರಿಯಲ್ಲಿ ಕಾಫಿ ಬೆಲೆ 15 ರೂ. ಇತ್ತು. ಈಗ 30 ರೂ.ಗೆ ಏರಿಕೆಯಾಗಿದೆ. ದೋಸೆಗೆ 25 ರೂ. ಇದ್ದದ್ದು, ಈಗ 50 ರೂ. ಆಗಿದೆ ಎಂದರು.
ಈ ವೇಳೆ ಎಲ್ಲದಕ್ಕೂ ಡೀಸೆಲ್, ಪೆಟ್ರೋಲ್ ದರ ಹೆಚ್ಚಳ ಕಾರಣವಾ?. ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸಿದರು. ಅಲ್ಲದೇ ಎಲ್ಲ ವಸ್ತುಗಳ ದರ ಏರಿಕೆಗೆ ಇಂಧನ ದರ ಹೆಚ್ಚಳವೊಂದೇ ಕಾರಣವಲ್ಲ. ದೋಸೆ ದರ ಏರಲು ಅಕ್ಕಿಯ ದರ ಏರಿದ್ದು ಕಾರಣ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಹೌದು ದೋಸೆ ಬೆಲೆ ಹೆಚ್ಚಲು ಡೀಸೆಲ್ ದರ ಏರಿಕೆ ಕಾರಣ. ಡೀಸೆಲ್ ದರ ಹೆಚ್ಚಾದರೆ ಸಾಗಾಣಿಕೆ ದರ ಹೆಚ್ಚಾಗುತ್ತದೆ. ಗ್ಯಾಸ್ ದರ ಹೆಚ್ಚಳ ಆದರೆ ಅಡುಗೆ ಬೆಲೆ ಹೆಚ್ಚಳ ಆಗುತ್ತದೆ. ಈ ಬಗ್ಗೆ ನಿಮ್ಮ ಮನೆಯ ಹೋಂ ಮಿನಿಸ್ಟರ್ಗೆ ಕೇಳಿ ನೋಡಿ ಗೊತ್ತಾಗುತ್ತದೆ ಎಂದು ಸಿದ್ದರಾಮಯ್ಯ ಕಿಚಾಯಿಸಿದರು.