ಬೆಂಗಳೂರು: ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಲ್ಲಿ ಸೆಂಟರ್ ಆಫ್ ಎಕ್ಸಲನ್ಸ್ ಕೇಂದ್ರ ಸ್ಥಾಪಿಸಲಾಗುವುದು ಎಂದು ವಿವಿ ಕುಲಪತಿ ಎಸ್. ಸಚ್ಚಿದಾನಂದ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಗ್ಯ ವಿವಿ ಕೇವಲ ಪರೀಕ್ಷೆ ನಡೆಸಿ ಸರ್ಟಿಫಿಕೇಟ್ ನೀಡಲಷ್ಟೇ ಸೀಮಿತವಾಗಿರಬಾರದು. ಆರೋಗ್ಯ ಕ್ಷೇತ್ರದ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ವಿವಿ ಹೊಸ ಹೆಜ್ಜೆ ಇಟ್ಟಿದೆ. ಯುವ ಜನರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವಂತಾಗಬೇಕು. ಸೃಜನಶೀಲತೆಗೆ ಒತ್ತು ನೀಡಬೇಕು. ರೋಗಿಗಳ ತಪಾಸಣೆಯ ಹೊರತಾಗಿ ವೈದ್ಯರು ಸಂಶೋಧನೆಯಲ್ಲಿ ತೊಡಗುವಂತಾಗಬೇಕು. ಸೀಮಿತ ಚೌಕಟ್ಟಿನಿಂದ ಹೊರಬಂದು ಹೊಸತನ್ನು ಜಗತ್ತಿಗೆ ಪರಿಚಯಿಸುವಂತಾಗಬೇಕು. ಇದೇ ಉದ್ದೇಶದಿಂದ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಕೆಂಗೇರಿ ಬಳಿಯ ಭೀಮನಕಯಪ್ಪೆಯಲ್ಲಿ 50 ಎಕರೆ ಪ್ರದೇಶದಲ್ಲಿ 'ಸೆಂಟರ್ ಆಫ್ ಎಕ್ಸಲೆನ್ಸ್' ಕೇಂದ್ರ ತಲೆ ಎತ್ತಲಿದೆ. ಅಲ್ಲೇ ಪುನರ್ವಸತಿ ಕೇಂದ್ರಗಳು ಇರಲಿವೆ. ಸಂಶೋಧನೆ, ವಂಶವಾಹಿಯ ಅಧ್ಯಯನ ನಡೆಯುವ ಸಂಸ್ಥೆಗಳ ಸಂಖ್ಯೆ ಭಾರತದಲ್ಲಿ ಕಡಿಮೆ ಇದ್ದು, ನಮ್ಮ ರಾಜ್ಯದಲ್ಲಿ ಇಂಥ ಕೇಂದ್ರ ಬರುತ್ತಿರುವುದು ಸಂತಸದ ವಿಷಯ ಎಂದು ಡಾ. ಸಚ್ಚಿದಾನಂದ ಹೇಳಿದರು.
ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಯಂತೆ ವೃತ್ತಿ ನಿರತ ವೈದ್ಯರು ತಮ್ಮ ಕ್ಷೇತ್ರದಲ್ಲಿಯೂ ಆವಿಷ್ಕಾರ ಮತ್ತು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇಂತಹ ಅವಕಾಶ ಸೃಷ್ಟಿಸಲು 'ಸೆಂಟರ್ ಆಫ್ ಎಕ್ಸ್ಲನ್ಸ್' ಸ್ಥಾಪಿಸಲಾಗುತ್ತಿದೆ. ವೈದ್ಯರು ತಮಗೆ ಬೇಕಾದ ತಂತ್ರಜ್ಞಾನ ರೂಪಿಸಿಕೊಳ್ಳುವಂತಾಗಬೇಕು. ವೈದ್ಯಕೀಯ ಮತ್ತು ತಂತ್ರಜ್ಞಾನ ಒಂದೆಡೆ ಸೇರಿದಾಗ ಹೊಸ ವೈದ್ಯಕೀಯ ಸಲಕರಣೆಗಳನ್ನು ಆವಿಷ್ಕರಿಸಬಹುದು. ಆರೋಗ್ಯ ಕ್ಷೇತ್ರದಲ್ಲಿ ಹೊಸದನ್ನು ತರಬೇಕು. ಯಾವುದೇ ಹೊಸ ಸಂಶೋಧನೆಗೆ 5-10 ವರ್ಷಗಳು ಬೇಕಾಗುತ್ತದೆ. ನಮ್ಮ ಈ ಪ್ರಯತ್ನದಿಂದ ಪ್ರಯೋಗಾಲಯದಿಂದ ಮಾರುಕಟ್ಟೆಗೆ ತಲುಪುವ ಸಮಯ ತಗ್ಗಲಿದೆ. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದರು.
ನಮ್ಮಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ಒದಗಿಸಲು ರಾಜೀವ್ ಗಾಂಧಿ ಆರೋಗ್ಯ ವಿವಿಯು ಇಂತಹ ಪ್ರಯತ್ನಕ್ಕೆ ಮುಂದಾಗಿದೆ. ಜೈವಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು. ಔಷಧ, ವಂಶವಾಹಿ ಚಿಕಿತ್ಸೆ (ಜೀನ್ ಥೆರಪಿ), ಮೆಡಿಕಲ್ ಎಂಜನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆಗೆ ಸೆಂಟರ್ ಆಫ್ ಎಕ್ಸಲನ್ಸ್ ಕೇಂದ್ರ ಸ್ಥಾಪನೆಯಾಗಲಿದ್ದು, ಇಲ್ಲಿಂದ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಿಗೆ ಜ್ಞಾನ ವಿಸ್ತರಣೆ ಆಗುತ್ತದೆ ಎಂದು ಡಿಸಿಎಂ ಡಾ. ಅಶ್ವತ್ಥನಾರಾಯಣ ಹೇಳಿದರು.