ಬೆಂಗಳೂರು: ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಟ್ ಬಂಧನ ಖಂಡಿಸಿ ನಗರದ ಟೌನ್ ಹಾಲ್ ಮುಂದೆ ಪ್ರಗತಿಪರ ಹಾಗೂ ವಿವಿಧ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು. ಸುಳ್ಳು ಆರೋಪ ಹೊರಿಸಿ ತೀಸ್ತಾ ಸೆಟಲ್ವಾಟ್ರನ್ನು ಗುಜರಾತ್ನ ಎಟಿಸಿ ಪೊಲೀಸರು ಬಂಧಿಸಿರುವುದು ಅಕ್ಷಮ್ಯ ಅಪರಾಧ. ಸೇಡಿನ ರಾಜಕಾರಣಕ್ಕಾಗಿ ಬಂಧಿಸಿರುವುದು ಸರಿಯಲ್ಲ ಎಂದು ಭಿತ್ತಪತ್ರ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಂಧನವಾಗಿರುವ ತೀಸ್ತಾರನ್ನು ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಗುಜರಾತ್ ಗಲಭೆಯಲ್ಲಿ ಮೋದಿ ಬಳಗಕ್ಕೆ ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಬಳಗ ಸೇಡಿನ ರಾಜಕಾರಣ ಪ್ರಾರಂಭಿಸಿದೆ. ಸುಳ್ಳು ಆರೋಪದ ಮೇಲೆ ತೀಸ್ತಾ ಅವರನ್ನು ವಿಚಾರಣೆ ಹೆಸರಲ್ಲಿ ಕಸ್ಟಡಿಗೆ ತೆಗೆದುಕೊಂಡಿದೆ. ಇದು ಘೋರ ಅನ್ಯಾಯ. ಸರ್ವಾಧಿಕಾರಿ ದಬ್ಬಾಳಿಕೆ ಎಂದು ಖಂಡಿಸಿದರು.
ಎರಡು ದಶಕಗಳ ಹಿಂದೆ ಗುಜರಾತ್ನಲ್ಲಿ ನಡೆದ ಗಲಭೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ತೀಸ್ತಾ ಹಾಗೂ ನಿವೃತ್ತ ಡಿಜಿಪಿ ಆರ್.ಬಿ. ಶ್ರೀಕುಮಾರ್ ಅವರನ್ನು ಗುಜರಾತ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. 2002ರ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಪಡಿಸುವಂತಹ ಅಪರಾಧಗಳಲ್ಲಿ ಶಿಕ್ಷೆಗೆ ಒಳಗಾಗುವಂತೆ ಅನೇಕ ವ್ಯಕ್ತಿಗಳ ವಿರುದ್ಧ ಸುಳ್ಳು ಪುರಾವೆಗಳನ್ನು ಸೃಷ್ಟಿಸುವ ಮೂಲಕ ಕಾನೂನಿನ ದುರ್ಬಳಕೆ ಮಾಡುವಲ್ಲಿ ಸಂಚು ನಡೆಸಿದ್ದರು ಎಂದು ಅಹಮದಾಬಾದ್ ಅಪರಾಧ ದಳ ವಿಭಾಗದ ಇನ್ಸ್ಪೆಕ್ಟರ್ ಡಿ.ಬಿ. ಬರಾದ್ ದೂರು ದಾಖಲಿಸಿದ್ದರು.
ಇದನ್ನೂ ಓದಿ: ತೀಸ್ತಾ ಸೆಟಲ್ವಾಟ್ರನ್ನು ವಶಕ್ಕೆ ಪಡೆದ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ