ಬೆಂಗಳೂರು: ರಾಜ್ಯಾದ್ಯಂತ ನಾಳೆ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗ (ಒಪಿಡಿ) ಹಾಗೂ ಸರ್ಕಾರದಿಂದ ನಿಗದಿಪಡಿಸಲಾಗಿರುವ ವೈದ್ಯಕೀಯ ಸೇವೆಗಳು ಲಭ್ಯವಾಗುವುದಿಲ್ಲ.
ಕರ್ನಾಟಕ ನಿವಾಸಿ ವೈದ್ಯರ ಸಂಘದ ಅಸಮಾಧಾನ, ಬೇಡಿಕೆಗಳೇನು?
1. ಸರ್ಕಾರವು ರಾಜ್ಯದ ಯುವ ವೈದ್ಯರ ಕಡೆಗೆ ನಿರ್ಲಕ್ಷ್ಯ ತೋರುತ್ತಿದೆ. ರಾಜ್ಯದಲ್ಲಿ ಕೋವಿಡ್ ಅತ್ಯಂತ ತೀವ್ರವಾಗಿದ್ದ ಪರಿಸ್ಥಿತಿಯಲ್ಲಿ ಸರ್ಕಾರವು ರೆಸಿಡೆಂಟ್ ಹಾಗೂ ಇಂಟರ್ನ್ ಡಾಕ್ಟರ್ಸ್ಗಳನ್ನು ಮನಸ್ಸಿಗೆ ಬಂದ ಹಾಗೆ ಬಳಸಿಕೊಂಡು ಈಗ ಕೆಲಸ ಮುಗಿದ ನಂತರ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ.
2. ಶೈಕ್ಷಣಿಕ ಶುಲ್ಕ ಪರಿಷ್ಕರಣೆ ಕುರಿತಂತೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಪಡೆದವರಿಗೆ ಬಹಳ ತಾರತಮ್ಯವಾಗುತ್ತಿದೆ. ಕರ್ನಾಟಕ ರಾಜ್ಯವು ಅತಿ ಹೆಚ್ಚು ಶೈಕ್ಷಣಿಕ ಶುಲ್ಕವನ್ನು ಪಡೆಯುತ್ತಿದೆ. ಹಾಗಾಗಿ ಇಂತಹ ಕೋವಿಡ್ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸಿದ ನಿವಾಸಿ ವೈದ್ಯರುಗಳ (MD/MS/DM/Mchs) ಸೇವೆ ಪರಿಗಣಿಸಿ, ಶೈಕ್ಷಣಿಕ ಶುಲ್ಕವನ್ನು 2018ರ ಶೈಕ್ಷಣಿಕ ಸಾಲಿನ ಶುಲ್ಕದಂತೆ ಪುನರ್ ರಚನೆ ಮಾಡಬೇಕು.
ಈ ಸಂಬಂಧ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ ಜಾಣ ಕಿವುಡು ಮನೋವೃತ್ತಿ ತೋರಿದೆ. ಶೈಕ್ಷಣಿಕ ಶುಲ್ಕವನ್ನು ಏಕಾಏಕಿ 30,000 ದಿಂದ ಒಂದು ಲಕ್ಷಕ್ಕೆ ಹೆಚ್ಚಿಸುವುದು ಎಷ್ಟು ಸರಿ? ಅಂತ ಪ್ರಶ್ನೆ ಮಾಡಿದ್ದಾರೆ.
3. ಕೋವಿಡ್ ಎರಡನೆಯ ಅಲೆಯ ಸಂದರ್ಭದಲ್ಲಿ ಅನೇಕ ಯುವ ವೈದ್ಯರು ಹಾಗೂ ಅವರ ಮನೆಯವರಿಗೆ ಸೋಂಕು ತಗಲಿ ಅನೇಕ ರೀತಿಯಲ್ಲಿ ನರಳಾಬೇಕಾಯಿತು. ಆಗ ಸರ್ಕಾರವು ಕೇವಲ ಕಣ್ಣೀರೊರೆಸುವ ಕೆಲಸ ಮಾಡಲು ಕೋವಿಡ್ ಅಪಾಯ ಭತ್ಯೆ ನೀಡುವುದಾಗಿ ಆದೇಶ ಹೊರಡಿಸಿತೇ ಹೊರತು ಬಿಡಿಗಾಸು ಕೈ ಸೇರಿಲ್ಲ. ಹಾಗಾಗಿ ತಕ್ಷಣವೇ ಕೋವಿಡ್ ಅಪಾಯ ಭತ್ಯೆಯ ಅನುದಾನವನ್ನು ಬಿಡುಗಡೆ ಮಾಡಬೇಕು.

ಇದನ್ನೂ ಓದಿ: ದುರ್ಗಾಪೂಜೆಗೆ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ: ಸಾರ್ವಜನಿಕ ಸ್ಥಳಗಳಲ್ಲಿ 5 ದಿನ ಪೂಜೆಗೆ ಅವಕಾಶ
ಕರ್ನಾಟಕ ನಿವಾಸಿ ವೈದ್ಯರ ಸಂಘದ ಅಧ್ಯಕ್ಷೆ ಡಾ.ನಮ್ರತಾ ಹೇಳಿಕೆ
ಕೋವಿಡ್ ಅಥವಾ ಕೋವಿಡೇತರ ಸೇವೆಗಳೆಂದು ಸಹ ನೋಡದೆ ಕಳೆದ 3 ತಿಂಗಳಿನಿಂದ ನಿರಂತರವಾಗಿ ದುಡಿಯುತ್ತಿರುವ ಇಂಟರ್ನ್ ಹಾಗೂ ಪೋಸ್ಟ್ ಎಂಬಿಬಿಎಸ್ ಜೂನಿಯರ್ ಡಾಕ್ಟರ್ಸ್ಗಳಿಗೆ ಬಿಡಿಗಾಸು ಕೂಡ ಸರ್ಕಾರ ನೀಡಿಲ್ಲ. ಅನೇಕ ಬಾರಿ ನಮ್ಮ ಬೇಡಿಕೆಗಳ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಕೂಡ ಸರ್ಕಾರದಿಂದ ಪ್ರತಿಕ್ರಿಯೆ ಬಾರದ ಕಾರಣ ಇದೀಗ ಇಂತಹ ಕಠಿಣ ನಿರ್ಧಾರವನ್ನು ತೆಗೆದು ಕೊಂಡಿದ್ದೇವೆ ಅಂತ ಸಂಘದ ಅಧ್ಯಕ್ಷೆ ಡಾ.ನಮ್ರತಾ ತಿಳಿಸಿದ್ದಾರೆ.