ಬೆಂಗಳೂರು : ಹಲವು ಸಮುದಾಯಗಳು ಮೀಸಲಾತಿಗಾಗಿ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಮೀಸಲಾತಿಯ ಪ್ರಮಾಣವನ್ನು ಶೇ 50 ಕ್ಕಿಂತ ಹೆಚ್ಚು ಮಾಡಲು ರಾಜ್ಯ ಸರ್ಕಾರ ಒಲವು ತೋರಿಸಿದೆ. ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆಯೇ ಎಂದು ಸರ್ವೋಚ್ಚ ನ್ಯಾಯಾಲಯ ರಾಜ್ಯಗಳನ್ನು ಕೇಳಿರುವ ಬೆಳವಣಿಗೆ ಆಶಾದಾಯಕ ಎಂದು ಸರ್ಕಾರ ಹೇಳಿದೆ.
ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದರು.
ಪಂಚಮಸಾಲಿ ಸಮುದಾಯ ತನಗೆ ಪ್ರವರ್ಗ 2ಎ ಮೀಸಲಾತಿ ನೀಡಬೇಕೆಂದು, ಕುರುಬ ಸಮುದಾಯ ತನ್ನನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿ ಹೋರಾಟ ನಡೆಸಿವೆ. ಈ ಮಧ್ಯೆ ಪರಿಶಿಷ್ಟ ಪಂಗಡದವರು ತಮಗಿರುವ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ 7 ಕ್ಕೆ ಏರಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಇದೇ ರೀತಿ ಒಕ್ಕಲಿಗ ಮತ್ತಿತರ ಜಾತಿಗಳು ತಮಗೂ ಇಂಥ ಮೀಸಲಾತಿ ಬೇಕು ಎಂದು ಒತ್ತಾಯ ಮಾಡುತ್ತಲೇ ಇವೆ. ಆದರೆ ಸಂವಿಧಾನಬದ್ಧವಾಗಿ ಮೀಸಲಾತಿಯ ಪ್ರಮಾಣ ಶೇ 50 ರಷ್ಟಿರುವುದರಿಂದ ಈ ಬೇಡಿಕೆಗಳನ್ನು ಈಡೇರಿಸುವುದು ಬಹಳ ಕಷ್ಟ. ಇಂತಹ ಕಾಲದಲ್ಲೇ ಮೀಸಲಾತಿಯ ಪ್ರಮಾಣವನ್ನು ಏರಿಸುವ ಸಂಬಂಧ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸುಪ್ರೀಂ ಕೋರ್ಟ್ ರಾಜ್ಯಗಳ ಅಭಿಪ್ರಾಯ ಕೇಳಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಮೀಸಲಾತಿಯ ಪ್ರಮಾಣ ಸಂವಿಧಾನಬದ್ಧವಾಗಿ ಹೆಚ್ಚಳವಾದರೆ ಈಗಿನ ಬೇಡಿಕೆಗಳಿಗೆ ಪೂರಕವಾಗಿ ಮೀಸಲಾತಿ ಒದಗಿಸಲು ಸಾಧ್ಯ. ಆದರೆ ಮೀಸಲಾತಿಯ ಪ್ರಮಾಣ ಶೇ 50ರ ಪ್ರಮಾಣದಲ್ಲಿರುವುದರಿಂದ ಬೇಡಿಕೆ ಇದೆ ಎಂದು ಮೀಸಲಾತಿ ಒದಗಿಸಲು ಸಾಧ್ಯವಿಲ್ಲ. ಹಾಗೆ ಮೀಸಲಾತಿ ಒದಗಿಸಿದ ಮಹಾರಾಷ್ಟ್ರದ ಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ವಿವರಿಸಿದರು.
ತಜ್ಞರ ಸಮಿತಿ ರಚನೆ: ಇದೇ ಕಾರಣಕ್ಕಾಗಿ ಮೀಸಲಾತಿಗೆ ಒತ್ತಾಯಿಸಿ ಬಂದಿರುವ ಬೇಡಿಕೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಲು ತೀರ್ಮಾನಿಸಿದೆ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮುದಾಯವನ್ನು ಹಾವನೂರು ಆಯೋಗ ಸೇರಿದಂತೆ ಎಲ್ಲ ಆಯೋಗಗಳು ಮುಂದುವರಿದ ಜಾತಿ ಎಂದೇ ಗುರುತು ಮಾಡಿದ್ದವು. ಆದರೆ 2009 ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿತು. ಅಂದು ಹಿಂದುಳಿದ ವರ್ಗ 3ಬಿ ಗೆ ಸೇರಿಕೊಂಡ ಸಮುದಾಯ ಈಗ 2ಎ ಗಾಗಿ ಬೇಡಿಕೆ ಸಲ್ಲಿಸಿದೆ. ಅದರ ಕುರಿತೂ ತಜ್ಞರ ಸಮಿತಿ ಚರ್ಚಿಸಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ.. ಆದಾಯ ಕೊರತೆ ಅನುದಾನ: ರಾಜ್ಯಗಳಿಗೆ 74,340 ಕೋಟಿ ರೂ. ಕೊಟ್ಟ ಕೇಂದ್ರ