ಬೆಂಗಳೂರು: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಮೈಸೂರು ರಸ್ತೆಯ ಡಾ.ಮುತ್ತುರಾಜ್ ಜಂಕ್ಷನ್ ಬಳಿಯ ಸಿಗ್ನಲ್ ಫ್ರೀ ಕಾರಿಡಾರ್ ಕೆಳ ಸೇತುವೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.
ನಾಯಂಡಹಳ್ಳಿ ಜಂಕ್ಷನ್ನಿಂದ ಜೆ.ಡಿ.ಮರ ಹಾಗೂ ಸಿಲ್ಕ್ ಬೋಡ್೯ ಜಂಕ್ಷನ್ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆ ಕಾಮಗಾರಿ ನಡೆಯುತ್ತಿದೆ. ಇದರ ಒಂದು ಭಾಗವಾದ ಡಾ.ಮುತ್ತುರಾಜ್ ಜಂಕ್ಷನ್ ಬಳಿ ರೂ.17.82 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
277 ಮೀಟರ್ ಉದ್ದದ ಕೆಳ ಕಾಮಗಾರಿ ವಿಳಂಬವಾಗಿರುವುದಕ್ಕೆ ಅಧಿಕಾರಿಗಳ ವಿರುದ್ಧ ಗರಂ ಆದರು. ಇದಕ್ಕೆ ಸಮಜಾಯಿಷಿ ನೀಡಿದ ಅಧಿಕಾರಿಗಳು, ಜಂಕ್ಷನ್ ಬಳಿ ಬೆಸ್ಕಾಂನಿಂದ ಯುಜಿ ಕೇಬಲ್ ಅಳವಡಿಕೆ ವಿಳಂಬವಾಯ್ತು ಅಲ್ಲದೆ ಜಲಮಂಡಳಿ ಕಾಮಗಾರಿಯಿಂದಲೂ ವಿಳಂಬವಾಯ್ತು. ಅಲ್ಲದೆ, ಕಾಮಗಾರಿ ಸ್ಥಳದಲ್ಲಿ ಬೃಹತ್ ಬಂಡೆ ಅಡ್ಡ ಬಂದು, ನಿವಾಸಿಗಳು ಅದನ್ನು ಬ್ಲಾಸ್ಟ್ ಮಾಡಲು ಬಿಡಲಿಲ್ಲ. ಅದಕ್ಕಾಗಿ ಬಂಡೆ ತೆರವುಗೊಳಿಸಿ ಕಾಮಗಾರಿಯನ್ನು ಮುಂದುವರೆಸಲಾಗಿದೆ. ಈ ಎಲ್ಲಾ ಕಾರಣಗಳಿಂದ ಕಾಮಗಾರಿಯ ವಿಳಂಬವಾಗಿದೆ ಎಂದರು.
ಸದ್ಯ ಕಾಮಗಾರಿಯು ಶೇಕಡ 80 ರಷ್ಟು ಪೂರ್ಣಗೊಂಡಿದ್ದು, ಜುಲೈ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಜತೆಗೆ, ಸಿಗ್ನಲ್ ಫ್ರೀ ಕಾರಿಡಾರ್ ಯೋಜನೆಯಡಿ ಮಡು ಜಂಕ್ಷನ್, ಫುಡ್ ವಲ್ಡ್೯ ಜಂಕ್ಷನ್, ಕಾಮಾಕ್ಯ ಜಂಕ್ಷನ್ ಸೇರಿ 1ಕಿ.ಮೀ ಉದ್ದದ ಮೇಲ್ಸೇತುವೆ ಕಾಮಗಾರಿಗಾಗಿ 125 ಕೋಟಿ ವೆಚ್ಚದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಆನಂತರ, ಮೇಯರ್ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚರಂಡಿ ಪರಿಶೀಲನೆ ನಡೆಸಿದರು. ಕಾಮಗಾರಿಯನ್ನು ಸರಿಯಾಗಿ ನಿರ್ಮಿದಿರುವುದನ್ನು ಗಮನಿಸಿದ ಮಹಾಪೌರರು, ಕೂಡಲೇ ಸಂಬಂಧಪಟ್ಟ ಅಭಿಯಂತರರ ಮೇಲೆ ಶಿಸ್ತು ಕ್ರಮ ಕೈಕೊಳ್ಳುವಂತೆ ಸೂಚಿಸಿದರು. ಕಾಮಗಾರಿ ಪುನರ್ನಿರ್ಮಾಣ ಮಾಡಿ, ನೀರು ಸರಾಗವಾಗಿ ಹರಿಯುವಂತೆ ಮಾಡಲು ಸೂಚಿಸಿದರು.
ಈ ವೇಳೆ, ಗಾಳಿ ಆಂಜನೇಯ ದೇವಸ್ಥಾನದ ಹತ್ತಿರ ಸ್ಕೈ ವಾಕ್ ನಿರ್ಮಾಣವನ್ನು ಅನಧಿಕೃತವಾಗಿ ಕೈಗೆತ್ತಿಕೊಂಡಿದ್ದು, ಅದನ್ನು ತೆರವುಗೊಳಿಸುವಂತೆ ಸ್ಥಳೀಯರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಮಹಾಪೌರರು ಈ ಬಗ್ಗೆ ಮತ್ತೆ ಸ್ಥಳೀಯರ ಅಭಿಪ್ರಾಯ ಪಡೆದು ಕ್ರಮ ಜರಗಿಸುವಂತೆ ಸೂಚಿಸಿದರು.