ಬೆಂಗಳೂರು: 1998ನೇ ಸಾಲಿನ ಕೆಪಿಎಸ್ಸಿ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳ ಆದೇಶಗಳನ್ನು ಪಾಲನೆ ಮಾಡದಿರುವ ಸರ್ಕಾರಗಳ ಕ್ರಮಕ್ಕೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಹೈಕೋರ್ಟ್ ಆದೇಶದಂತೆ ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದು ಆಯ್ಕೆಯಾಗಿರುವ ಅಭ್ಯರ್ಥಿಗಳು ಸೇವಾ ಹಿರಿತನ ಮತ್ತು ಬಡ್ತಿ ನೀಡುವಂತೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಬಿ.ವೀರಪ್ಪ ನೇತೃತ್ವದ ವಿಭಾಗೀಯ ಪೀಠ, ನೇಮಕಾತಿ ನಡೆದಿರುವ ದಿನದಿಂದ ಇಲ್ಲಿವರೆಗಿನ ಸರ್ಕಾರಗಳ ಕ್ರಮಕ್ಕೆ ವಿರುದ್ಧ ಅಸಮಾಧಾನನ ವ್ಯಕ್ತಪಡಿಸಿತು.
1998 ರಿಂದ 2020ರ ವರೆಗೆ ಸುದೀರ್ಘ 22 ವರ್ಷಗಳ ಕಾಲ ಆಡಳಿತ ನಡೆಸಿದ ಯಾವ ಸರ್ಕಾರಗಳು ನ್ಯಾಯಾಲಯಗಳು ನೀಡಿರುವ ಯಾವ ಆದೇಶಗಳನ್ನೂ ಸಮರ್ಪಕವಾಗಿ ಜಾರಿ ಮಾಡಿಲ್ಲ. ಸರ್ಕಾರಗಳು ದೋಷಿಗಳನ್ನು ರಕ್ಷಿಸುವ ಕೆಲಸವನ್ನು ತಂತ್ರಗಾರಿಕೆ ಮೂಲಕ ಮಾಡಿಕೊಂಡು ಬರುತ್ತಿವೆ. ಇದರಿಂದಾಗಿ ಇಡೀ ನೇಮಕ ಪ್ರಕ್ರಿಯೆಯೇ ಗಬ್ಬೆದ್ದು ಹೋಗಿದೆ ಎಂದು ಕಟು ಟೀಕೆ ವ್ಯಕ್ತಪಡಿಸಿದೆ.
ಸರ್ಕಾರದ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿರುವ ಪೀಠ, ಸುಮ್ಮನೆ ಬಾಯಿ ಮಾತಿಗೆ ಆದೇಶ ಜಾರಿಗೊಳಿಸುತ್ತೇವೆ ಎಂದು ನೀವು (ಸರ್ಕಾರ) ಹೇಳುಕೊಂಡು ಬರುತ್ತಿದ್ದೀರಿ. ಆದರೆ ಯಾವ ಸರ್ಕಾರ ಕೂಡ ಈವರೆಗೆ ನುಡಿದಂತೆ ನಡೆದುಕೊಂಡಿಲ್ಲ. ಇದಕ್ಕೆ ಕೊನೆ ಎಂಬುದೇ ಇಲ್ಲವೇ? ನ್ಯಾಯಾಲಯಗಳ ಆದೇಶಗಳಿಗೆ ಬೆಲೆ ಇಲ್ಲವೇ? ಎಂದು ಕೇಳಿದೆ.
ಅರ್ಜಿದಾರರ ಪರ ವಕೀಲ ಡಿ.ಆರ್.ರವಿಶಂಕರ್, ಪರಿಷ್ಕೃತ ಪಟ್ಟಿಯಲ್ಲಿ ಸ್ಥಾನ ಪಡೆದವರಿಗೆ ನಿಯಮದಂತೆ ಸೇವಾ ಹಿರಿತನ ಮತ್ತು ಬಡ್ತಿಯನ್ನು ಸರ್ಕಾರ ನೀಡುತ್ತಿಲ್ಲ. ಇನ್ನೊಂದೆಡೆ ಹೈಕೋರ್ಟ್ ಆದೇಶ ಸ್ಪಷ್ಟವಾಗಿದ್ದರೂ ಸಹ ಅನರ್ಹರನ್ನು ಸೇವೆಯಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ಆರೋಪಿಸಿದ ವೇಳೆ, ಪ್ರತಿಕ್ರಿಯಿಸಿದ ಪೀಠ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.