ಬೆಂಗಳೂರು: ರಾಜ್ಯದಲ್ಲಿ ಕಳೆದೊಂದು ವಾರದಿಂದ ಕೊರೊನಾ ಹೊಸ ಸೋಂಕಿತರ ಪ್ರಮಾಣ ಶೇ. 1.5ಕ್ಕಿಂತ ಕೆಳಗೆ ಇದೆ. ಆದರೆ, ದೇವಸ್ಥಾನ, ಮಾರುಕಟ್ಟೆಯಲ್ಲಿನ ಜನರ ನಡವಳಿಕೆ ನೋಡಿದರೆ ಭಯವಾಗುತ್ತೆ. ಹೀಗಾಗಿ, ಜನಸಾಮಾನ್ಯರು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅಂತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಎರಡನೇ ಅಲೆ ಮುಗಿಯುತ್ತಾ ಬಂದಿದ್ದು, ಮೂರನೇ ಅಲೆ ಬರೋದಿಲ್ಲ ಅನ್ನೋ ಖಾತ್ರಿಯಿಲ್ಲ. ರಾಜ್ಯದಲ್ಲಿ ಲಸಿಕೆ ಅನುಪಾತ ಶೇಕಡ 60-70ರಷ್ಟು ಪೂರ್ಣವಾಗುವ ತನಕ ಬಹಳ ಎಚ್ಚರಿಕೆಯಲ್ಲಿ ಇರಬೇಕು. ಇದನ್ನ ಪದೇ ಪದೇ ಜನರಿಗೆ ಹೇಳ್ತಿದ್ದೇವೆ. ತಜ್ಞರು ಕೂಡ ಎಚ್ಚರಿಕೆಯನ್ನ ನೀಡುತ್ತಿದ್ದು, ಮುನ್ನೆಚ್ಚರಿಕೆ ವಹಿಸಬೇಕು. ನಿಮ್ಮ ಆರೋಗ್ಯ, ನಿಮ್ಮ ಜವಾಬ್ದಾರಿ. ಇದನ್ನ ಜನರು ಅರ್ಥ ಮಾಡಿಕೊಳ್ಳದೇ ಹೋದರೆ ಬಹಳ ಕಷ್ಟವಾಗಲಿದೆ ಎಂದರು.
ಮತ್ತೊಂದು ಅಲೆಗೆ ಅವಕಾಶ ಕೊಡದಿರಿ
ಮತ್ತೊಂದು ಅಲೆ ಎದುರಿಸುವ ಅವಕಾಶ ಕೊಡಬಾರದು. ಮೂರನೇ ಅಲೆ ತಡೆಯುವುದು ನಮ್ಮ ಕೈನಲ್ಲೇ ಇದ್ದು, ಮುಂದೆ ಬರಬಹುದಾದ ಯಾವುದೇ ಅಲೆ ತಡೆಯಲು ನಾವು ನಮ್ಮ ನಡವಳಿಕೆಯಲ್ಲಿ ಬದಲಾವಣೆ ತರಲೇಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳಬೇಕು. ಜೊತೆಗೆ ಅನಗತ್ಯ ಸಭೆಯಲ್ಲಿ ಭಾಗಿಯಾಗುವುದು ತಪ್ಪಿಸಬೇಕು.
ಜನರ ಮನವಿ ಮೇರೆಗೆ ಸರ್ಕಾರವೂ ಮದುವೆ ಸಮಾರಂಭಕ್ಕೆ 100 ಜನರಿಗೆ ಅವಕಾಶ ಕೊಟ್ಟರೆ, 400-500 ಜನರು ಸೇರ್ತಿದ್ದಾರೆ. ಮಾರುಕಟ್ಟೆಯಲ್ಲೂ ಸಹ ಹೀಗೆ ಇದೆ. ಯಾವುದೇ ನಿಯಂತ್ರಣವಿಲ್ಲದೇ ಜನರು ಸೇರುವುದನ್ನ ನೋಡ್ತಾ ಇದ್ದರೆ ನಿಜಕ್ಕೂ ಅಸಮಾಧಾನವಾಗಿದೆ. ಜನರು ಈಗಲಾದರೂ ಗಂಭೀರವಾಗಿ ತೆಗೆದುಕೊಂಡು ಅವಶ್ಯಕತೆ ಇದ್ದರಷ್ಟೇ ಮಾತ್ರ ಹೊರಗೆ ಹೋಗಿ ಬರಬೇಕು. ಮುಂದಿನ 3-4 ತಿಂಗಳು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಹಾವಳಿ: ಇನ್ನು ನಿನ್ನೆ ಮತ್ತೊಂದು ಡೆಲ್ಟಾ ಪ್ಲಸ್ ಸೋಂಕು ಪತ್ತೆಯಾಗಿರುವುದರ ಕುರಿತು ಹೇಳಿದ್ದಾರೆ. ಆದರೆ, ನಿಖರ ವರದಿ ಇನ್ನೂ ನನಗೆ ಬಂದಿಲ್ಲ ಎಂದರು.