ಬೆಂಗಳೂರು: ಕೇಂದ್ರ ಸರ್ಕಾರ ಬಡವರಿಗೆ ವಿತರಣೆ ಮಾಡಿದ್ದ ಅಕ್ಕಿ ಮೂಟೆಗಳನ್ನು ಬಿಜೆಪಿ ಮುಖಂಡರು ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಸ್ಪಷ್ಟೀಕರಣ ನೀಡಿದ್ದು, ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್ಡೌನ್ ಮಾಡಿದ ಪರಿಣಾಮ ಸ್ಥಳದ ಅಭಾವ ಎದುರಾದ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಒಟ್ಟು 14,260 ಕ್ವಿಂಟಾಲ್ ಆಹಾರ ಧಾನ್ಯಗಳನ್ನು ದೊಮ್ಮಸಂದ್ರದ ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘಕ್ಕೆ ಸೇರಿದ ಗೋದಾಮುಗಳಲ್ಲಿ ಸಂಗ್ರಹಣೆ ಮಾಡಲು ತೀರ್ಮಾನ ಮಾಡಲಾಗಿತ್ತು. ಏಪ್ರಿಲ್ 14ರಿಂದ ನಿರಂತರವಾಗಿ ಗೋದಾಮಿಗೆ ಸರಬರಾಜಾಗುತ್ತಿದ್ದ ಅಕ್ಕಿಯನ್ನು ಶೇಖರಣೆ ಮಾಡಿ ಗೋದಾಮಿಗೆ ಬಾಡಿಗೆ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಗ್ರಾಹಕರಿಗೆ ಏಕಕಾಲದಲ್ಲೇ ಎರಡು ತಿಂಗಳ ಪಡಿತರ ಧಾನ್ಯವನ್ನು ವಿತರಣೆ ಮಾಡಲು ತೀರ್ಮಾನಿಸಲಾಯಿತು. ಅದರಂತೆ ಏ. 18ರಂದು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಆನೇಕಲ್ ತಾಲೂಕಿಗೆ ಪಡಿತರ ಧಾನ್ಯಗಳನ್ನು ಮರು ವಿತರಣೆ ಮಾಡಲು ತೀರ್ಮಾನಿಸಲಾಗಿತ್ತು. ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿನ ಸರ್ಜಾಪುರ ಹೋಬಳಿಯಲ್ಲಿ ಎಸ್ಎಫ್ಎಸ್ಸಿಎಸ್ ಗೋದಾಮು ಭರ್ತಿಯಾದ ಹಿನ್ನೆಲೆಯಲ್ಲಿ ಖಾಸಗಿ ಗೋದಾಮುಗಳಲ್ಲಿ ಆಹಾರ ಧಾನ್ಯಗಳನ್ನು ಬಟವಾಡೆ ಮಾಡುವಂತೆ ಅಲ್ಲಿನ ತಹಶೀಲ್ದಾರ್ ಅವರೇ ಸೂಚನೆ ಕೊಟ್ಟಿದ್ದರು ಎಂದು ಹೇಳಿದರು.
ನಿಯಮಾನುಸಾರವಾಗಿಯೇ ಆಹಾರ ಧಾನ್ಯಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಇದಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕೂಡ ಸಮ್ಮತಿ ನೀಡಿ ಪತ್ರವನ್ನು ನೀಡಿದ್ದಾರೆ. ಎಲ್ಲಿಯೂ ಕೂಡ ಆಹಾರ ಧಾನ್ಯಗಳು ಮಧ್ಯವರ್ತಿಗಳ ಪಾಲಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ಯಾವುದೇ ರೀತಿಯ ಲೋಪದೋಷ ಆಗಲು ಅಧಿಕಾರಿಗಳು ಅವಕಾಶ ನೀಡಿಲ್ಲ. ಎಲ್ಲ ಪ್ರಕ್ರಿಯೆಗಳೂ ನಿಯಮಬದ್ಧವಾಗಿ ನಡೆದಿವೆ. ಎಲ್ಲೂ ಅಕ್ರಮ ನಡೆದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.