ಬೆಂಗಳೂರು: ಹೊಸಕೋಟೆ ಸಮೀಪದ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ 12ನೇ ಘಟಿಕೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ, ಕೋವಿಡ್-19 ಸಂಕಷ್ಟ ಕಾಲದಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ 2021ರಲ್ಲಿ ಮತ್ತಷ್ಟು ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕಿದೆ. ಯಾರೂ ಆ ಸಮಸ್ಯೆಗೆ ಬೆನ್ನು ತಿರುಗಿಸಬಾರದು. ಎಲ್ಲರೂ ಒಟ್ಟಾಗಿ ಹೋರಾಟ ಮಾಡದಿದ್ದರೆ ಈ ವೈರಸ್ ಮಹಾಮಾರಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದರು.
ವ್ಯಾಕ್ಸಿನ್ ಬಂದಿದ್ದರೂ ನಾವು ಸದಾ ಎಚ್ಚರದಿಂದ ಇರಬೇಕು. ನಾನೂ ಒಬ್ಬ ವೈದ್ಯನಾಗಿ ಸಂಕಷ್ಟ ಕಾಲದಲ್ಲಿ ವೈದ್ಯರು ಎದುರಿಸುವ ಸಮಸ್ಯೆಗಳನ್ನು ಬಲ್ಲೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಹೊತ್ತಿನಲ್ಲಿ ಸೋಂಕಿನ ಭೀತಿಯಿಂದ ಬಾಡಿಗೆ ಮನೆ, ವಸತಿ ಸಮುಚ್ಛಯಗಳಲ್ಲಿ ವಾಸವಿದ್ದ ವೈದ್ಯರು, ಅರೆವೈದ್ಯ ಸಿಬ್ಬಂದಿಯನ್ನು ಖಾಲಿ ಮಾಡಿಸಿದ ಅಮಾನವೀಯ ಘಟನೆಗಳು ನಡೆದಿವೆ. ಈ ಬಗ್ಗೆ ನನಗೆ ನೋವಿದೆ. ಆದರೆ, ಇವರೆಲ್ಲರೂ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಜನರ ಸೇವೆ ಮಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿರು.
ಪ್ರತಿಯೊಬ್ಬರಿಗೂ ವಿದ್ಯಾರ್ಥಿ ಜೀವನ ಬಹಳ ಮುಖ್ಯವಾಗಿರುತ್ತದೆ. ಕ್ಯಾಂಪಸ್ನಿಂದ ಹೊರಡುವಾಗ ನಮ್ಮ ಗುರಿಯನ್ನು ಸಾಧಿಸಿಕೊಂಡೇ ಹೊರಬೀಳಬೇಕು. ನೀವು ಈಗ ನಿಮ್ಮ ಜೀವನದ ಬಹುದೊಡ್ಡ ತಿರುವಿನಲ್ಲಿ ನಿಂತಿದ್ದೀರಿ ಹಾಗೂ ಮುಂದೆ ನಿರ್ಧಾರಗಳನ್ನು ಕೈಗೊಳ್ಳುವ ಹಂತಕ್ಕೆ ಹೋಗುತ್ತಿದ್ದೀರಿ. ದೊಡ್ಡ ದೊಡ್ಡ ವ್ಯವಸ್ಥೆಗಳ ಭಾಗವಾಗುತ್ತೀರಿ ಎಂಬುದನ್ನು ಮನಗಾಣಬೇಕು ಎಂದು ಡಿಸಿಎಂ ಹೇಳಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಎಂವಿಜೆ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಅಧ್ಯಕ್ಷ ಡಾ.ಎಂ.ಜೆ.ಮೋಹನ್, ಸಿಇಒ ಡಾ.ಎಂ.ಧರಣಿ ಹಾಗೂ ಪ್ರಾಂಶುಪಾಲ ಡಾ.ಬಿ. ರವಿಚಂದರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.