ಬೆಂಗಳೂರು: ರಾಜ್ಯದ ನಾಲ್ಕು ಕಂದಾಯ ವಿಭಾಗದಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿ ಅನುದಾನದಡಿ ತಲಾ ಒಂದೊಂದು ಸೈನಿಕ ಶಾಲೆ ಆರಂಭಕ್ಕೆ ಸರ್ಕಾರ ಮುಂದಾಗಿದ್ದು, ಶೇ. 50ರಷ್ಟು ಸೀಟು ನಮ್ಮ ರಾಜ್ಯದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ನೀಡುವ ಷರತ್ತಿನೊಂದಿಗೆ ಅಗತ್ಯ ಭೂಮಿ, ಅನುದಾನವನ್ನು ಸರ್ಕಾರವೇ ನೀಡಲಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಬೀದರ್ ಜಿಲ್ಲೆಯಲ್ಲಿ ಎಸ್.ಸಿ.ಪಿ, ಟಿ.ಎಸ್.ಪಿಗಾಗಿ ಬಿಡುಗಡೆಯಾದ ಅನುದಾನ ಮತ್ತು ಅವ್ಯವಹಾರ ಕುರಿತು ಉನ್ನತಮಟ್ಟದ ತನಿಖೆಗೆ ಒತ್ತಾಯಿಸಿದ ಸದಸ್ಯ ಅರವಿಂದ ಕುಮಾರ ಅರಳಿ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಎಸ್ಸಿ, ಎಸ್ಟಿ ಜನಾಂಗದ ಅನುದಾನ ದುರುಪಯೋಗವಾಗಬಾರದು. ಎಸ್ಸಿ, ಎಸ್ಟಿ ಮನೆಗಳ ಮುಂದೆ ಮಾತ್ರ ಕಾಂಕ್ರೀಟ್ ರಸ್ತೆ ಮಾಡಿದರೆ ಸಾಲದು, ಅವರು ಸಂಚರಿಸುವ ಎಲ್ಲಾ ಕಡೆ ನಿರ್ಮಿಸಬೇಕು ಎಂದರು.
ನನ್ನ ಅವಧಿಯಲ್ಲಿ ರಸ್ತೆಗೆ ಹಣ ಕಡಿಮೆ ಮಾಡಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ. ಇದರಲ್ಲಿ ದುರುಪಯೋಗದ ಪ್ರಶ್ನೆಯೇ ಇಲ್ಲ. ಬೋಗಸ್ ಬಿಲ್, ಕೆಲಸ ಮಾಡದೇ ಬಿಲ್ ಪಡೆದಿದ್ದರೆ ತನಿಖೆಗೆ ಆದೇಶಿಸಲಾಗುತ್ತದೆ. ಬೀದರ್, ಔರಾದ್, ಬಾಲ್ಕಿಯಲ್ಲಿ ಹೆಚ್ಚು ಅವ್ಯವಹಾರವಾಗಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಕುರಿತು ಮಾಹಿತಿ ನೀಡಿದಲ್ಲಿ ತನಿಖೆ ನಡೆಸಲಾಗುತ್ತದೆ ಎಂದರು.
ಈ ವೇಳೆ, ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ, ದಲಿತರ ಕೇರಿ, ಇತರರ ಕೇರಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದರಿಂದ ಸಾಮರಸ್ಯ ಬೆಳೆಯುತ್ತದೆ. ಸವರ್ಣೀಯರ ಕೇರಿಗೂ ರಸ್ತೆ ಮಾಡಿದರೆ ಎಲ್ಲರೂ ಒಂದೇ ಎನ್ನುವ ಭಾವನೆ ಬೆಳೆಯಲಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಈ ತಾರತಮ್ಯ ಹೋಗಲಾಡಿಸಲೆಂದೇ ಎಲ್ಲಾ ಕಡೆ ರಸ್ತೆ ವಿಸ್ತರಣೆ ಮಾಡಿದ್ದೇವೆ. ಅಸೆಟ್ ಕ್ರಿಯೇಟ್ ಆಗಲೆಂದು ವಸತಿ ಶಾಲೆ ಮಾಡಿಸುತ್ತಿದ್ದೇವೆ. ಇಸ್ಲಾಂ ಧರ್ಮದಲ್ಲಿ ಹುಟ್ಟಿದರೂ ಬಸವ ತತ್ವದಲ್ಲಿ ಬೆಳೆದವರು ನೀವು ಎಂದು ಇಬ್ರಾಹಿಂ ಕಾಳಜಿಗೆ ಶ್ಲಾಘನೆ ವ್ಯಕ್ತಪಡಿಸಿದರು.
ಎಸ್ಸಿ, ಎಸ್ಟಿಗೆ ಪ್ರತಿ ವರ್ಷ ಬಜೆಟ್ನಲ್ಲಿ 29 ಸಾವಿರ ಕೋಟಿಗೂ ಹೆಚ್ಚು ಹಣ ಬರಲಿದೆ. ಹಾಗಾಗಿ ಸೈನಿಕ ಶಾಲೆಗಳ ಮಾದರಿಯಲ್ಲಿ ಶಾಲೆಗಳ ಆರಂಭಕ್ಕೆ ನಾವು ಭೂಮಿ, ಅನುದಾನ ಕೊಡಲಿದ್ದೇವೆ. ಆದರೆ ಶೇ. 50ರಷ್ಟು ಸೀಟುಗಳನ್ನು ನಮ್ಮ ರಾಜ್ಯದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕೊಡಬೇಕು. ನಾಲ್ಕು ಕಂದಾಯ ವಿಭಾಗದಲ್ಲಿ ನಾಲ್ಕು ಸೈನಿಕ ಶಾಲೆ ಆರಂಭಕ್ಕೆ ಮಾತುಕತೆ ನಡೆದಿದೆ. ಮ್ಯಾನೇಜ್ಮೆಂಟ್ ಅವರದ್ದು, ಅನುದಾನ ನಮ್ಮದು. ನಮ್ಮ ಮಕ್ಕಳು ಸೈನಿಕ ಶಾಲೆ ಮಕ್ಕಳ ರೀತಿ ಆಗಲಿ ಎನ್ನುವ ಕಾಳಜಿ ಇದೆ. ಕೊರೊನಾ ಕಾರಣಕ್ಕೆ ಕಳೆದ ಬಾರಿ ಆಗಲಿಲ್ಲ. ಆದರೆ ಈ ಬಾರಿ ಮಾಡಲಿದ್ದೇವೆ. ಈ ಶಾಲೆಗಳಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಎಂದರು.
ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ದಲಿತರು, ಸವರ್ಣೀಯರ ನಡುವೆ ಸಮನ್ವತಯತೆ ಮೂಡಿಸಲು ಈ ನಿರ್ಧಾರ ಶ್ಲಾಘನೀಯ ಎಂದರು.
ಮತ್ತೆ ಕುಟುಕಿದ ಹಳ್ಳಿಹಕ್ಕಿ:
ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಇಲ್ಲಿಯವರೆಗೂ ಲಕ್ಷ ಕೋಟಿ ರೂ. ಎಸ್.ಸಿ.ಪಿ, ಟಿಎಸ್.ಪಿಗೆ ಹರಿದಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಹಣ ಕೊಟ್ಟಿದ್ದಾರೆ. ಆದರೆ ಈಗ ಕಾರಜೋಳ ಸ್ಕೀಮ್ ಹೇಳುತ್ತಿದ್ದಾರೆ. ಇಲ್ಲಿಯವರೆಗೂ ಬರೀ ರಸ್ತೆ ಗುಂಡಿ ಮಾಡಿದ್ದಾರೆ. ಎಸ್ಟೇಟ್ ರೋಡ್ ಆಗಿವೆ. ಹಾಗಾಗಿ ಈ ಹಣ ಹೇಗೆ ಖರ್ಚು ಮಾಡಬೇಕು ಎಂದು ಸಭೆ ನಡೆಸಿ ನಿರ್ಧರಿಸಿ ಎಂದರು.