ಬೆಂಗಳೂರು: ಸಚಿವಾಲಯದ ಎಲ್ಲ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ(Biometric attendance system) ಎಲ್ಲ ಅಧಿಕಾರಿ/ಸಿಬ್ಬಂದಿ ಹಾಜರಾತಿ ದಾಖಲಿಸುವುದು ಕಡ್ಡಾಯವಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್( Ravi Kumar Chief Secretary of Karnataka) ತಿಳಿಸಿದ್ದಾರೆ.
ಈ ಸಂಬಂಧ ನೂತನ ಆದೇಶ ಹೊರಡಿಸಿರುವ ಅವರು, ಕೆಸಿಎಸ್ಆರ್(KCSR) ಅನ್ವಯ ಕಚೇರಿಗಳಿಗೆ ನಿಗದಿತ ಸಮಯದೊಳಗೆ ಹಾಜರಾಗುವುದು ಹಾಗೂ ಪ್ರತಿ ದಿನ ಒಟ್ಟು 7.30 ಗಂಟೆ ಸಮಯ ಕರ್ತವ್ಯ ನಿರ್ವಹಿಸುವುದು ಸಹ ಕಡ್ಡಾಯವಾಗಿರುತ್ತದೆ.

ಆದರೆ, ಈ ನಿಟ್ಟಿನಲ್ಲಿ, ಸರ್ಕಾರದ ಆದೇಶಗಳು ಹಾಗೂ ಸುತ್ತೋಲೆಗಳನ್ನು ಪಾಲಿಸದೇ ಬೇಜವಾಬ್ದಾರಿ ತೋರುತ್ತಿರುವುದನ್ನು ಗಮನಿಸಲಾಗಿದೆ. ಪ್ರಸ್ತುತ ಸಚಿವಾಲಯದ ಕೆಲವು ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪರಿಶೀಲಿಸಲಾಗಿರುತ್ತದೆ. ಇಲಾಖೆಗಳ ಬಯೋಮೆಟ್ರಿಕ್ ಹಾಜರಾತಿಯಲ್ಲಿ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ ಎಂದು ತಿಳಿಸಿದ್ದಾರೆ.
ಒಟ್ಟು 10 ಅಂಶಗಳ ನ್ಯೂನತೆಯನ್ನು ತಿಳಿಸಿರುವ ಅವರು, ಪ್ರಮುಖವಾಗಿ..
- ಬಹುತೇಕ ಅಧಿಕಾರಿ/ಸಿಬ್ಬಂದಿ ಕಚೇರಿಗೆ ತಡವಾಗಿ ಆಗಮಿಸುತ್ತಿರುವುದನ್ನು ಮತ್ತು ನಿಗದಿತ 7.30 ಗಂಟೆಗಳಷ್ಟು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ.
- ವರ್ಗಾವಣೆಯಾದ, ಮುಂಬಡ್ತಿಯಾದ ಬಹುತೇಕ ಅಧಿಕಾರಿ/ಸಿಬ್ಬಂದಿಗಳ ಬಯೋಮೆಟ್ರಿಕ್ ಹಾಜರಾತಿಯನ್ನು ಅವರು ಕಾರ್ಯನಿರ್ವಹಿಸುತ್ತಿರುವ ಇಲಾಖೆಯಲ್ಲಿ ದಾಖಲಿಸುತ್ತಿಲ್ಲ.
- ಬಹುತೇಕ ಅಧಿಕಾರಿ/ಸಿಬ್ಬಂದಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುತ್ತಿಲ್ಲ.
- ಅಧಿಕಾರಿಗಳು ಫ್ಲೆಕ್ಸಿ ಸೌಲಭ್ಯವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಹಾಗೂ ತಿಂಗಳಿನಲ್ಲಿ ಬಹುತೇಕ ಮಿಸ್ಸಿಂಗ್ ಫ್ಲಾಶ್ ಗಳನ್ನು ಸರಿಪಡಿಸಿಕೊಳ್ಳುತ್ತಿರುವುದನ್ನು ಗಮನಿಸಲಾಗಿದೆ.ಆದೇಶ ಪ್ರತಿ
ಇವುಗಳು ಸೇರಿದಂತೆ ಒಟ್ಟು 10 ಅಂಶಗಳ ವಿವರ ನೀಡಿರುವ ಅವರು, ಮೇಲ್ಕಂಡ ಅಂಶಗಳನ್ನು ಸಚಿವಾಲಯದ ಎಲ್ಲ ಇಲಾಖೆಗಳ ಅಧಿಕಾರಿ/ಸಿಬ್ಬಂದಿ ಹಾಗೂ ಆಯಾ ಇಲಾಖೆಗಳ ಎಎಂಎಸ್ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಮುಂದಿನ ದಿನಗಳಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ((Biometric attendance system) ಈ ರೀತಿಯ ನ್ಯೂನತೆಗಳು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿದೆ ಹಾಗೂ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇಲಾಖೆಗಳ ಎಎಂಎಸ್ ಅಧಿಕಾರಿಗಳು ಆಯಾ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳ ಹಾಜರಾತಿ ನಿರ್ವಹಣೆಯ ಜವಾಬ್ದಾರಿ ಹೊಂದಿರುತ್ತಾರೆ. ಆದರೆ, ಸರಿಯಾಗಿ ನಿರ್ವಹಣೆ ಮಾಡದೇ ಇರುವುದನ್ನು ಗಮನಿಸಿದ್ದು, ಇದರೊಂದಿಗೆ ಲಗತ್ತಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹಾಗೂ ಇನ್ನು ಮುಂದೆ ಎಚ್ಚರಿಕೆಯಿಂದ ಎಎಂಎಸ್ ಕರ್ತವ್ಯವನ್ನು ನಿರ್ವಹಿಸುವಂತೆ ನಿರ್ದೇಶಿಸಿದೆ.

ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯಲ್ಲಿ ಹಾಜರಾತಿ ದಾಖಲಿಸುವಲ್ಲಿ ಹಾಗೂ ಎಎಂಎಸ್ ಅಧಿಕಾರಿಗಳ ಕರ್ತವ್ಯ ನಿರ್ವಹಣೆಯಲ್ಲಿ ಇದೇ ರೀತಿಯ ತಪ್ಪುಗಳು ಪುನರಾವರ್ತಿಸಿದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ರವಿಕುಮಾರ್ ಕಟ್ಟುನಿಟ್ಟಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Kulgam Encounter: ಕುಲ್ಗಾಮ್ನಲ್ಲಿ ಐವರು ಉಗ್ರರ ಹತ್ಯೆಗೈದ ಭದ್ರತಾಪಡೆ