ಬೆಂಗಳೂರು: ಯುವತಿಯ ವಿಡಿಯೋ ಆಧರಿಸಿ ಅತ್ಯಾಚಾರ ಪ್ರಕರಣ ದಾಖಲಿಸಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡುವುದು ಸರಿಯಲ್ಲ. ಅದು ಅವರಿಗೆ ಶೋಭೆ ತರುವುದಿಲ್ಲ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಎಸ್ಐಟಿ ತನಿಖೆ ನಡೆಯುತ್ತಿದೆ. ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ತನಿಖೆ ಅಗತ್ಯ ಇಲ್ಲ. ಎಸ್ಐಟಿ ತನಿಖೆ ಬೇಗ ಮುಗಿಯುತ್ತದೆ. ವಿಡಿಯೋ ನಕಲಿ ಎಂದು ನಾವು ಹೇಳಿದ್ದೇವೆ. ಆದರೆ ಕಾಂಗ್ರೆಸ್ ಇದರಲ್ಲಿ ರಾಜಕಾರಣ ಮಾಡುತ್ತಿದೆ. ಮುಂದಿನ ಚುನಾವಣೆ ಲಾಭ ಪಡೆದುಕೊಳ್ಳಲು ಹೊರಟಿದೆ ಎಂದು ಆರೋಪಿಸಿದರು.
ಕಮಲ ಡ್ಯಾಮೇಜ್ ಹುನ್ನಾರ: ಸದನದ ಸಮಯವನ್ನೂ ವ್ಯರ್ಥ ಮಾಡಲಾಗುತ್ತಿದೆ. ಜನರ ಸಮಸ್ಯೆಗಳು ಸಾಕಷ್ಟಿವೆ. ಅದರ ಬಗ್ಗೆ ಚರ್ಚೆ ಮಾಡುವ ಬದಲು, ಇಂತಹ ವಿಚಾರಕ್ಕೆ ಕಾಂಗ್ರೆಸ್ ಸದನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಎಸ್ಐಟಿ ತನಿಖೆ ಆಗುವವರೆಗೂ ಕಾಂಗ್ರೆಸ್ ಸಹಕರಿಸಲಿ. ಸತ್ಯ ಹೊರಬರಲಿ. ಆದಷ್ಟು ಬೇಗ ವಾಸ್ತವ ಬಹಿರಂಗವಾಗಲಿ. ನ್ಯಾಯಾಧೀಶರ ತನಿಖೆ ಎಂಬ ನೆಪದಲ್ಲಿ ವಿಳಂಬ ಮಾಡಿಸುವ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ. ವಿಳಂಬ ಮಾಡಿ ತೇಜೋವಧೆ ಮಾಡುತ್ತಾ ನಮ್ಮ ಪಕ್ಷಕ್ಕೆ ಮುಜುಗರ ಮಾಡುವುದೇ ಕಾಂಗ್ರೆಸ್ ಉದ್ದೇಶ. ಚುನಾವಣೆಗೆ ಡ್ಯಾಮೇಜ್ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ಕಿಡಿಕಾರಿದರು.
ಯುವತಿ ವಿಡಿಯೋ ಆಧರಿಸಿ ಅತ್ಯಾಚಾರ ಕೇಸ್ ಹಾಕಲು ಒತ್ತಾಯ: ಸಿಡಿ ವಿಚಾರದಲ್ಲಿ ನಾನೂ ಕೂಡ ಸದನದಲ್ಲಿ ಚರ್ಚೆಯಲ್ಲಿ ಬಾಗವಹಿಸಬೇಕಿತ್ತು. ಆದರೆ ಹಿರಿಯರು ಬೇಡ ಎಂದಿದ್ದರಿಂದ ಸುಮ್ಮನಾದೆ. ಯುವತಿಯ 34 ಸೆಕೆಂಡ್ ವಿಡಿಯೋ ಬಗ್ಗೆ ಸಿದ್ದರಾಮಯ್ಯ ಅವರು ಪ್ರಸ್ತಾಪ ಮಾಡಿದ್ದಾರೆ. ಆದರೆ ಯುವತಿ ಸ್ವಂತ ಇಚ್ಛೆಯಿಂದ ಮಾತನಾಡಿದ್ದಾಳಾ? ಅಥವಾ ಒತ್ತಾಯಪೂರ್ವಕವಾಗಿ ಮಾಡಿಸಿದ್ದಾರಾ? ಗೊತ್ತಿಲ್ಲ. ಆ ವಿಡಿಯೋ ಆಧರಿಸಿ ಅತ್ಯಾಚಾರ ಕೇಸ್ ಹಾಕಲು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ಐಟಿ ತನಿಖೆ ಮಾಡುತ್ತಿದೆ. ಸಿಡಿ ಬಿಡುಗಡೆ ಆದ ನಂತರ ಗೃಹ ಸಚಿವರು ಯುವತಿಗೆ ರಕ್ಷಣೆಗೆ ನೀಡಲು ಸಿದ್ಧರಿದ್ದಾರೆ. ಯುವತಿಯ ಪತ್ತೆಗೂ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಯುವತಿ ಎಲ್ಲಿದ್ದಾಳೆ ಎಂದು ಯಾರಿಗೂ ಗೊತ್ತಿಲ್ಲ ಎಂದರು.
ಯುವತಿ ನೇರವಾಗಿ ಬಂದು ಹೇಳಿಕೆ ನೀಡಬಹುದಿತ್ತು. ತನಗಾದ ಅನ್ಯಾಯದ ಬಗ್ಗೆ ತಿಳಿಸಬಹುದಿತ್ತು. ಆದರೆ ಕಾಣದ ಸ್ಥಳದಲ್ಲಿ ಕುಳಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಯಾರೋ ಬಲವಂತದಿಂದ ವಿಡಿಯೋ ಮಾಡಿರಬಹುದಲ್ಲವೇ? ಎಂದು ಶಂಕೆ ವ್ಯಕ್ತಪಡಿಸಿದರು.
ಯುವತಿಯ ಪೋಷಕರು ಬೆಳಗಾವಿಗೆ ಬಂದು ಯಾಕೆ ದೂರು ನೀಡಿದರು?: ದಿನೇಶ್ ಕಲ್ಲಹಳ್ಳಿ ದೂರು ನೀಡಿ ವಾಪಸ್ ಪಡೆದರು. ಯುವತಿ ಕೂಡ ಎಲ್ಲೂ ದೂರು ನೀಡಿಲ್ಲ. ಬಲವಂತದಿಂದ ವಿಡಿಯೋ ಮಾಡಿಸಿರುವ ಸಾಧ್ಯತೆಯೂ ಇರಬಹುದು ಎಂದ ಅವರು, ಯುವತಿಯ ಪೋಷಕರು ಬೆಳಗಾವಿಗೆ ಬಂದು ಯಾಕೆ ದೂರು ನೀಡಿದರು? ಈ ಬಗ್ಗೆಯೂ ತನಿಖೆಯಾಗಲಿ ಎಂದು ಕಾಂಗ್ರೆಸ್ ಸದನದಲ್ಲಿ ಒತ್ತಾಯಿಸಿದೆ. ನಮಗಿರುವ ಮಾಹಿತಿ ಪ್ರಕಾರ ಯುವತಿಯ ಪೋಷಕರು ಬೆಳಗಾವಿಯ ಎಪಿಎಂಸಿ ವ್ಯಾಪ್ತಿಯಲ್ಲಿ ಎರಡು-ಮೂರು ವರ್ಷಗಳಿಂದ ಅಲ್ಲೇ ವಾಸ ಇದ್ದಾರೆ. ಅವರಿರುವ ಮನೆ ಎಪಿಎಂಸಿ ಯಾರ್ಡ್ ಪೊಲೀಸ್ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಯುವತಿ ನಾಪತ್ತೆ ಬಗ್ಗೆ ಪೋಷಕರು ದೂರು ನೀಡಿರಬಹುದು. ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಬಗ್ಗೆಯೂ ಕೂಲಂಕಷವಾಗಿ ತನಿಖೆಯಾಗಲಿ ಎಂದು ಆಗ್ರಹಿಸಿದರು.