ಬೆಂಗಳೂರು: ಅಡ್ಡಾದಿಡ್ಡಿ ವಾಹನ ಚಲಾಯಿಸಿದ ಚಾಲಕನನ್ನು ಪ್ರಶ್ನಿಸಿದಕ್ಕೆ ಹೆಡ್ ಕಾನ್ಸ್ಸ್ಟೇಬಲ್ ಮೇಲೆ ಕಾರು ಹರಿಸಿದ ಆರೋಪಿಯನ್ನು ಓಲ್ಡ್ ಏರ್ಪೋರ್ಟ್ ಟಾಫ್ರಿಕ್ ಪೊಲೀಸರು ಬಂಧಿಸಿದ್ದಾರೆ. ಮಾರತ್ ಹಳ್ಳಿಯ ಚಿನ್ನಪ್ಪನ ಹಳ್ಳಿಯ ನಿವಾಸಿ ರಾಮಾಂಜನೇಯಲು ಬಂಧಿತ ಆರೋಪಿ. ಹೆಡ್ ಕಾನ್ಸ್ಟೇಬಲ್ ಮುಬಾರಕ್ (48) ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಚ್ಚಾರ್ಜ್ ಆಗಿದ್ದಾರೆ.
ವೀಕೆಂಡ್ ಹಿನ್ನೆಲೆ ನಿನ್ನೆ (ಶನಿವಾರ) ರಾತ್ರಿ ಓಲ್ಡ್ ಏರ್ಪೋರ್ಟ್ ಸ್ಟೇಷನ್ ಇನ್ಸ್ಪೆಕ್ಟರ್ ಕೃಷ್ಣ ಕುಮಾರ್ ನೇತೃತ್ವದ ತಂಡ ಹೆಚ್ಎಎಲ್ ಬಳಿ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತಿದ್ದರು. ರಾತ್ರಿ ಸುಮಾರು 10:30ರ ವೇಳೆ ನಾಗರ ಭಾವಿಯಿಂದ ಚಿನ್ನಪ್ಪನಹಳ್ಳಿಗೆ ಹೋಗುತ್ತಿದ್ದ ರಾಮಾಂಜನೇಯಲು ಕ್ರೇಟಾ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ.
ಆಲ್ಕೋ ಮೀಟರ್ ತಪಾಸಣೆ ನಡೆಸಿದಾಗ ಕುಡಿದಿರುವುದು ಗೊತ್ತಾಗಿದೆ. ದಂಡ ಪಾವತಿಸುವಂತೆ ಪೊಲೀಸರು ತಾಕೀತು ಮಾಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹೆಡ್ ಕಾನ್ಸ್ಸ್ಟೇಬಲ್ ಮುಬಾರಕ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಬಳಿಕ ಕುಡಿದ ನಶೆಯಲ್ಲಿದ್ದ ಚಾಲಕ ಅಡ್ಡಾದಿಡ್ಡಿ ಕಾರು ಚಲಾಯಿಸಿ ಸಮೀಪದ ಗೋಡೆಗೆ ಗುದ್ದಿದ್ದಾನೆ. ಈ ವೇಳೆ ಮುಬಾರಕ್ ಮೇಲೆ ಕಾರು ಹತ್ತಿಸಿದ್ದರಿಂದ ಅವರ ಕಾಲಿನ ಮಂಡಿಗೆ ಗಾಯವಾಗಿತ್ತು. ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆ ಸಂಬಂಧ ಇಂದು ಚಾಲಕನನ್ನು ಬಂಧಿಸಿದ್ದಾರೆ.
ಮುಬಾರಕ್ ಕಳೆದ ನಾಲ್ಕು ವರ್ಷಗಳಿಂದ ಓಲ್ಡ್ ಏರ್ಪೋರ್ಟ್ ರೋಡ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋಪಿ ರಾಮಾಂಜನೇಯಲು ಐಸಿಐಸಿಐ ಬ್ಯಾಂಕ್ ಶಾಖೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವುದಾಗಿ ಸಂಚಾರಿ ಪೊಲೀಸರು ತಿಳಿಸಿದ್ದಾರೆ.