ಬೆಂಗಳೂರು: ಬಿಎಂಟಿಸಿ ದೇಶದಲ್ಲೇ ನಂ-1 ಸಾರಿಗೆ ಸಂಸ್ಥೆಯಾಗಿದ್ದು, ರಾಜಧಾನಿ ಬೆಂಗಳೂರಿಗರ ಜೀವನಾಡಿಯಾಗಿದೆ. ಸೂಪರ್ ಫಾಸ್ಟ್ ಮೆಟ್ರೋ ಸೇವೆ ಬಂದರೂ ಲಕ್ಷಾಂತರ ಜನರ ಅಚ್ಚುಮೆಚ್ಚಿನ ಸಾರಿಗೆ ಸಂಸ್ಥೆ ಅಂದರೆ ಇಂದಿಗೂ ಬಿಎಂಟಿಸಿಯೇ. ಸಾವಿರಾರು ನೌಕರರಿಗೆ ಅನ್ನ ನೀಡುತ್ತಿದ್ದ ಬಿಎಂಟಿಸಿ, ಇತ್ತೀಚಿಗೆ ನೌಕರರ ಪಿಎಫ್ ಹಣವನ್ನೂ ಕಟ್ಟಲಾಗದೆ ಪರದಾಡುತ್ತಿದೆಯಂತೆ.
ನೌಕರರ ಮುಷ್ಕರ ಹಾಗೂ ಕೋವಿಡ್ ಹೊಡೆತದಿಂದ ನಿಗಮಕ್ಕೆ ನಷ್ಟದಿಂದ ಹೊರಬರಲು ಸಾಧ್ಯವಾಗ್ತಿಲ್ಲ. ಜೊತೆಗೆ, ತೈಲ ಬೆಲೆ ಹೆಚ್ಚಳ ಪೆಟ್ಟು ಕೊಟ್ಟಿದೆ. ಇದರಿಂದ ನೌಕರರಿಗೆ ತಿಂಗಳ ವೇತನವನ್ನು ಪೂರ್ತಿ ನೀಡಲಾಗದೇ ಶೇ.50ರಷ್ಟು ಪಾವತಿ ಮಾಡುತ್ತಾ ಬರ್ತಿದೆ. ಅದೂ ಕೂಡ ಸರ್ಕಾರ ನೀಡುತ್ತಿರುವ ಅನುದಾನದಲ್ಲಿ ಕುಂಟುತ್ತಾ ಬಿಎಂಟಿಸಿ ಸಾಗಿದೆ. ಈ ಮಧ್ಯೆ ಪ್ರತಿ ತಿಂಗಳು ನೌಕರರ ಸಂಬಳದಲ್ಲಿ ಪಿಎಫ್ ಹಣವನ್ನು ಕಟ್ಟದೆ ನೂರಾರು ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ನೌಕರರ ಪಿಎಫ್ ಹಣವನ್ನು ಬಿಎಂಟಿಸಿ ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದೆ ಎನ್ನುವ ಆರೋಪವು ಕೇಳಿ ಬಂದಿದೆ.
ಸುಮಾರು 350 ಕೋಟಿಗೂ ಹೆಚ್ಚು ಹಣವನ್ನು ಬಿಎಂಟಿಸಿ ಪಿಎಫ್ ಟ್ರಸ್ಟ್ಗೆ ಪಾವತಿ ಮಾಡಬೇಕಿದೆ. ಇದರಿಂದ ಕಾರ್ಮಿಕರಿಗೆ ತುರ್ತು ಸಂದರ್ಭದಲ್ಲಿ ತಮ್ಮ ಪಿಎಫ್ ಹಣ ತೆಗೆದುಕೊಳ್ಳಲು ಆಗುತ್ತಿಲ್ಲ. ಜೊತೆಗೆ ನಿವೃತ್ತಿ ಹೊಂದಿದ ಸಂದರ್ಭದಲ್ಲೂ ಪಿಎಫ್ ಹಣ ಅವರ ಕೈ ಸೇರ್ತಿಲ್ಲ. ಈಗಾಗಲೇ ಸಾಕಷ್ಟು ಬಾರಿ ಕಾರ್ಮಿಕ ಸಂಘಟನೆಗಳೂ ಈ ಬಗ್ಗೆ ಮನವಿ ಮಾಡಿವೆ. ಕಾರ್ಮಿಕರ ಪಿಎಫ್ ಹಣವನ್ನು ಬಳಸಿಕೊಳ್ಳುವಂತಿಲ್ಲ, ಇದು ಕಾನೂನು ರೀತ್ಯಾ ಅಪರಾಧ ಅಂತ ಹೇಳಿದರೂ ಸಹ ನೌಕರರ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಸಾರಿಗೆ ನೌಕರರ ಮುಖಂಡ ಡಾ.ಕೆ.ಪ್ರಕಾಶ್ ಹೇಳಿದರು.
ನೌಕರರ ಸಂಬಳದಲ್ಲಿ ಕಡಿತ ಮಾಡಿದ ಹಣಕ್ಕೆ ಬಿಎಂಟಿಸಿ ಪಾಲನ್ನು ಸೇರಿಸಿ ಜಮಾ ಮಾಡಬೇಕು. ಆದರೆ ಬಿಎಂಟಿಸಿ ಜಮೆ ಮಾಡಿಲ್ಲ. ನೂರಾರು ಕೋಟಿಯಷ್ಟು ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದೆ. ಮತ್ತೊಂದು ಕಡೆ ಎಲ್ಐಸಿಗೆ ಕಟ್ಟಬೇಕಿರೋ ಸುಮಾರು 9 ಕೋಟಿ ರೂ. ಅಷ್ಟು ಹಣವನ್ನು ಬಿಎಂಟಿಸಿ ಪಾವತಿ ಮಾಡಿಲ್ವಂತೆ. ಇದರಿಂದ ನೌಕರರಿಗೆ ಏನಾದರೂ ಅನಾಹುತ ಸಂಭವಿಸಿದ್ರೆ ಯಾವುದೇ ರೀತಿಯ ಪರಿಹಾರ ಕೂಡ ಸಿಗೋದಿಲ್ಲ ಅನ್ನೋದು ನೌಕರರ ಕಳವಳ.
ಕಳೆದ ವರ್ಷ ಜೂನ್ನಲ್ಲಿ ಬಿಎಂಟಿಸಿ ನೀಡಿರೋ ಮಾಹಿತಿ ಪ್ರಕಾರ, 346 ಕೋಟಿ ಪಿಎಫ್ ಬಾಕಿ ಇದೆ. ಕಳೆದ ತಿಂಗಳು ಈ ಬಗ್ಗೆ ಆರ್ಟಿಐ ಮೂಲಕ ಮಾಹಿತಿ ಕೇಳಿದ್ರೆ ನಿಮ್ಮ ಮಾಹಿತಿ ಅಸ್ಪಷ್ಟವಾಗಿದ್ದು ಮಾಹಿತಿ ನೀಡಲು ಸಾಧ್ಯವಾಗೋದಿಲ್ಲ ಎಂದಿದೆ. ಅಂದರೆ ಕಳೆದ ವರ್ಷವೇ ಇಷ್ಟೊಂದು ದೊಡ್ಡ ಮೊತ್ತ ಬಾಕಿ ಇತ್ತು, ಈ ವರ್ಷ ಅದು ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನುತ್ತಿವೆ ಸಾರಿಗೆ ನೌಕರರ ಸಂಘಟನೆಗಳು.
ಈ ಬಗ್ಗೆ ಬಿಎಂಟಿಸಿ ಉಪಾಧ್ಯಕ್ಷ ಎಂ.ಆರ್.ವೆಂಕಟೇಶ್ ಅವರನ್ನು ಕೇಳಿದ್ರೆ, ಕಳೆದ ನಾಲ್ಕು ತಿಂಗಳಿಂದ ಮಾತ್ರ ಬಿಎಂಟಿಸಿ ನೌಕರರ ಪಿಎಫ್ ಹಣ ಬಾಕಿ ಇದೆ. 159 ಕೋಟಿ ಯಷ್ಟು ಎಲ್ಐಸಿಗೆ 6 ಕೋಟಿ 75 ಲಕ್ಷ ಮಾತ್ರ ಬಾಕಿ ಇದೆ. ಪ್ರತಿ ತಿಂಗಳು ನೌಕರರಿಗೆ ಸಂಬಳ ಕೊಡಲು ಈಗಾಗಲೇ ಸರ್ಕಾರದಿಂದ ಸಹಕಾರ ಪಡೆದು ಸಂಬಳ ನೀಡ್ತಿದ್ದೀವಿ. ನಿರೀಕ್ಷಿತ ಮಟ್ಟದಲ್ಲಿ ನಮಗೆ ಆದಾಯ ಬರ್ತಿಲ್ಲ, ಬಾಕಿ ಹಣವನ್ನು ಶೀಘ್ರವಾಗಿ ಪಾವತಿ ಮಾಡ್ತೀವಿ ಎಂದು ಭರವಸೆ ನೀಡಿದರು.