ಬೆಂಗಳೂರು : ಹೆಲ್ಮೆಟ್ ಹಾಕದೆ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಸ್ನೇಹಿತರಿಬ್ಬರು ಹೊರಟಿದ್ದರು. ಮಾರ್ಗಮಧ್ಯೆ ಜಂಕ್ಷನ್ನಲ್ಲಿ ಸಂಚಾರಿ ಪೊಲೀಸರು ತಪಾಸಣೆಯಲ್ಲಿ ನಿರತರಾಗಿದ್ದರು. ಸೀದಾ ಹೋಗಿ ದಂಡ ಕಟ್ಟಿದ್ರೆ ಯಾವುದೇ ಅನಾಹುತ ಆಗುತ್ತಿರಲಿಲ್ಲ. ಆದ್ರೆ, ಸ್ನೇಹಿತನ ಹುಚ್ಚುತನವೋ, ಪೊಲೀಸರ ಅಸಡ್ಡೆಯೋ ಯುವಕನೊರ್ವ ಆಸ್ಪತ್ರೆಯಲ್ಲಿ ಜೀವಂತ ಶವವಾಗಿದ್ದಾನೆ.
ಹೌದು, ಇದೇ ತಿಂಗಳು 9 ರಂದು ಮಧ್ಯಾಹ್ನ ಬೈಕಿನಲ್ಲಿ ಸ್ನೇಹಿತರಿಬ್ಬರು ಕತ್ರಿಗುಪ್ಪೆ ಬಳಿ ಹೋಗುವಾಗ ತಪಾಸಣೆ ನಿರತನಾಗಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಡಿವೈಡರ್ಗೆ ಗುದ್ದಿದ್ದರು. ಪರಿಣಾಮ ಕೌಶಿಕ್ ಎಂಬ ಯುವಕನ ತಲೆಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಈತನ ಸ್ನೇಹಿತ ಚೇತನ್ ಎಸ್ಕೇಪ್ ಆಗಿದ್ದ.
ಪ್ರಕರಣದ ವಿವರ
ತಪಾಸಣೆ ವೇಳೆ ಬೈಕ್ ಅಪಘಾತ: ಚೇತನ್ ಎಂಬಾತ ಕೌಶಿಕ್ನನ್ನ ಮನೆಗೆ ಡ್ರಾಪ್ ಮಾಡಲು ಸ್ಕೂಟರ್ನಲ್ಲಿ ಹೊರಟಿದ್ದ. ಇಬ್ಬರೂ ಹೆಲ್ಮೆಟ್ ಹಾಕದೆ ಸ್ಪೀಡ್ ಆಗಿ ಹೋಗುತ್ತಿದ್ದರು. ಜಂಕ್ಷನ್ನಲ್ಲಿ ಪೊಲೀಸರು ತಪಾಸಣೆ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಕೂಟರ್ ರಿಟರ್ನ್ ತೆಗೆದುಕೊಂಡು ಮತ್ತಷ್ಟು ವೇಗವಾಗಿ ಹೋಗಿದ್ದಾರೆ. ಇದನ್ನು ಗಮನಿಸಿದ ಸಂಚಾರಿ ಪೊಲೀಸರು ಸಹ ಅವರನ್ನು ಬೆನ್ನತ್ತಿದ್ದಾರೆ. ಆಗ ಯುವಕರು ಅತಿವೇಗದಿಂದ ಡ್ರೈವ್ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು ರಸ್ತೆಗೆ ಅಪ್ಪಳಿಸಿದ್ದಾರೆ. ಪರಿಣಾಮ ಕೌಶಿಕ್ ತಲೆಗೆ ತೀವ್ರ ಪೆಟ್ಟಾಗಿ ರಸ್ತೆಯಲ್ಲಿ ಬಿದ್ರೆ, ಚೇತನ್ ಸ್ಕೂಟರ್ ತೆಗೆದುಕೊಂಡು ಪರಾರಿಯಾಗಿದ್ದ. ಆ ಬಳಿಕ ಸ್ಥಳೀಯರು ಕೌಶಿಕ್ನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಸದ್ಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರೂ ಕೌಶಿಕ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಬ್ರೈನ್ ಡೆಡ್ ಆಗಿದ್ದು, ಚಿಕಿತ್ಸೆಗೆ ಸ್ಪಂದಿಸ್ತಿಲ್ಲವೆಂದು ಹೇಳಲಾಗ್ತಿದೆ. ಈ ಮಧ್ಯೆ ವಿಜಯನಗರ ಸಂಚಾರಿ ಠಾಣೆಯಲ್ಲಿ ಡ್ರೈವ್ ಮಾಡ್ತಿದ್ದ ಚೇತನ್ ವಿರುದ್ದ ಎಫ್ಐಆರ್ ದಾಖಲಾಗಿದೆ. ಆದ್ರೆ ಇದೆಲ್ಲದಕ್ಕೂ ಪೊಲೀಸರ ನಡೆಯೇ ಕಾರಣ ಅಂತ ಪೋಷಕರು ಆರೋಪಿಸಿದ್ದಾರೆ.