ಬೆಂಗಳೂರು: ಹೈದರಾಬಾದ್ನಿಂದ ಹೊಸದಾಗಿ ಬಂದಿದ್ದ ಕುಟುಂಬದ ಫ್ಲ್ಯಾಟ್ನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ನಗ- ನಾಣ್ಯ ದೋಚಿ ಪರಾರಿಯಾಗಿದ್ದ ಬಿಹಾರ ಮೂಲದ ಮೂವರು ಖದೀಮರನ್ನು ಕೆಲವೇ ಗಂಟೆಗಳಲ್ಲಿ ಸಿನಿಮೀಯ ಶೈಲಿಯಲ್ಲಿ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ಬಬೂಲ್ ಪಾಸ್ವಾನ್, ಬೋಲಾ ಪಾಸ್ವಾನ್ ಹಾಗೂ ಶ್ರೀಧರ್ ಪಾಸ್ವಾನ್ ಬಂಧಿತ ಆರೋಪಿಗಳು. ಬಂಧಿತರಿಂದ 1.25 ಕೋಟಿ ಮೌಲ್ಯದ ಡೈಮಂಡ್, ಚಿನ್ನಾಭರಣ ಹಾಗೂ ವಿದೇಶಿ ಕರೆನ್ಸಿ ಜಪ್ತಿ ಮಾಡಿಕೊಂಡಿರುವ ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಸಹಾಯ ಮಾಡಿ ಕದ್ದರು: ಹೈದರಾಬಾದ್ ನಿವಾಸಿಯೊಬ್ಬರು ಅರೆಕೆರೆ ಬಿಜಿ ರೋಡ್ನಲ್ಲಿ ರೋಷನ್ ಪ್ಲಾಟಿನಂ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಏಪ್ರಿಲ್ 24 ರಂದು ಹೊಸ ಮನೆಗೆ ಬಂದಿದ್ದರು. ಈ ವೇಳೆ ಕಳೆದ 8 ವರ್ಷಗಳಿಂದಲೂ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಆರೋಪಿಗಳು ಹೊಸ ಪ್ಲ್ಯಾಟ್ನ ಮಾಲೀಕರಿಗೆ ಸಹಾಯ ಮಾಡಿದ್ದರು.
ಬಳಿಕ ಕೆಲಸದ ಸಲುವಾಗಿ ಹೊಸದಾಗಿ ಬಂದಿದ್ದ ನಿವಾಸಿ ಹೈದರಾಬಾದ್ಗೆ ವಾಪಸ್ಸಾಗಿದ್ದರು. ಈ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತ ಖದೀಮರು ಕಳ್ಳತನಕ್ಕೆ ಸ್ಕೆಚ್ ಹಾಕಿದ್ದರು. ಇದರಂತೆ ಏ.27 ರಂದು ಮಧ್ಯರಾತ್ರಿ ಫ್ಲ್ಯಾಟ್ನ ಹಿಂಬಾಗಿಲಿನಿಂದ ನುಗ್ಗಿ ಒಂದೂವರೆ ಕೋಟಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ವಾಪಸ್ ಬಂದಾಗ ಘಟನೆ ಬಯಲು: ಅದೇ ದಿನ ರಾತ್ರಿ ಮಾಲೀಕ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವ ಸಂಗತಿ ಗೊತ್ತಾಗಿದೆ. ಕೂಡಲೇ ಹುಳಿಮಾವು ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಖದೀಮರ ಪತ್ತೆಗಾಗಿ ಎಸಿಪಿ ಪವನ್, ಹುಳಿಮಾವು ಇನ್ಸ್ಪೆಕ್ಟರ್ ಚಂದ್ರಕಾಂತ್ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ಫೀಲ್ಡ್ಗಿಳಿದಿದ್ದರು.
ಖದೀಮರು ಕಳ್ಳತನ ಮಾಡಿ ಹುಳಿಮಾವಿನಿಂದ ಮೆಜೆಸ್ಟಿಕ್ಗೆ ಬಂದು ವಾಹನದ ಮುಖಾಂತರ ಕೆಆರ್ಪುರ ರೈಲ್ವೇ ಸ್ಟೇಷನ್ ಬಂದಿಳಿರುವುದು ಗೊತ್ತಾಗಿತ್ತು. ಪೊಲೀಸರನ್ನು ದಿಕ್ಕು ತಪ್ಪಿಸಲು ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಬಳಿಕ ಅಲ್ಲಿಂದ ಬಂಗಾರಪೇಟೆಗೆ ತೆರಳಿ ಬೇಸಿಕ್ ಮಾದರಿಯ ಮೊಬೈಲ್ ಆನ್ ಮಾಡಿಕೊಂಡಿದ್ದಾರೆ. ಇದನ್ನು ಕಂಡುಕೊಂಡ ಪೊಲೀಸರು ಮೊಬೈಲ್ ನೆಟ್ವರ್ಕ್ ಹಾಗೂ ಸೆರೆಯಾಗಿದ್ದ ಸಿಸಿಟಿವಿ ಕ್ಯಾಮರಾ ಆಧಾರದ ಮೇಲೆ ಹಿಂಬಾಲಿಸಿ ಹೋಗಿದ್ದಾರೆ.
ಕೊಂಚ ತಡವಾಗಿದ್ದರೂ ಎಸ್ಕೇಪ್: ಪೊಲೀಸರಲ್ಲಿ ಗೊಂದಲ ಮೂಡಿಸಲು ಅಂದು ಬೆಳಗ್ಗೆ ಬಂಗಾರಪೇಟೆಯಿಂದ ಬಿಹಾರಕ್ಕೆ ಹೋಗುವ ರೈಲು ಹತ್ತದೇ ಮಧ್ಯಾಹ್ನ ಕೋಲ್ಕತ್ತಾಗೆ ಹೋಗುವ ರೈಲಿಗೆ ಕಾದು ಕುಳಿತಿದ್ದರು. ಖದೀಮರ ದುರದೃಷ್ಟವಶಾತ್ನಿಂದಾಗಿ ಎಂಬಂತೆ ರೈಲು 2 ಗಂಟೆ ತಡವಾಗಿದೆ. ಅಷ್ಟೊತ್ತಿಗಾಗಲೇ ರೈಲು ನಿಲ್ದಾಣಕ್ಕೆ ತಲುಪಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.