ಬೆಂಗಳೂರು: ನಿನ್ನೆ ನಡೆದ ಗಲಭೆ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಕೊರೊನಾ ಸೋಂಕು ಇರುವ ಕಾರಣ ಸರ್ಕಾರದ ನಿಯಮದ ಪ್ರಕಾರ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಆದರೆ, ಈ ಅಂತ್ಯಕ್ರಿಯೆಗೆ ಶಾಸಕ ಜಮೀರ್ ಅಹಮದ್ ಭಾಗಿಯಾಗಿ ಮತ್ತಷ್ಟು ಟೀಕೆಗೆ ಒಳಗಾಗಿದ್ದಾರೆ.
ಪೊಲೀಸರ ಗುಂಡೇಟಿಗೆ ಬಲಿಯಾದವರ ಅಂತ್ಯಕ್ರಿಯೆಯನ್ನ ಬೆಂಗಳೂರಿನ ನಂದಿದುರ್ಗ ರಸ್ತೆಯ ಖುದ್ದೂಸ್ ಸಾಬ್ ಖಬರಸ್ತಾನ್ ನಲ್ಲಿ ನಡೆಸಲಾಗಿದೆ. ಸದ್ಯ ಪೊಲೀಸ್ ಇಲಾಖೆ ಹೇಳಿರುವ ಪ್ರಕಾರ ಇವರು ಗಲಭೆಯಲ್ಲಿ ಭಾಗಿಯಾಗಿದ್ದರು. ಆದರೆ, ಪೋಷಕರು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದವರು ಅವರು ಗಲಾಟೆಗೆ ಹೋಗಿಲ್ಲಎಂದು ಹೇಳಿದ್ದಾರೆ. ಇಂತಹ ಸೂಕ್ಷ್ಮ ವಿಚಾರದ ಸಂದರ್ಭದಲ್ಲೂ ಶಾಸಕರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಇದು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಗಲಭೆ ಮಾಡಬಾರದಿತ್ತು ಕಾನೂನು ಹೋರಾಟ ಮಾಡಬೇಕಿತ್ತು ಎಂದಿದ್ದ ಜಮೀರ್ ಗೋಲಿಬಾರ್ ನಲ್ಲಿ ಸತ್ತವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದೇಕೆ..? ಅವರು ಅಮಾಯಕರೋ..? ಪುಂಡರೋ..? ಅನ್ನೋದು ತನಿಖೆ ಬಳಿಕವೇ ತಿಳಿಯಲಿದೆ. ಇದರ ನಡುವೆ ಶಾಸಕ ಜಮೀರ್ ಅಹ್ಮದ್ ಈ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಯಾವ ಸಂದೇಶ ನೀಡಿದ್ದಾರೆ. ಇಂತಹ ಸೂಕ್ಷ್ಮ ವಿಚಾರದಲ್ಲೂ ವಿವೇಚನೆ ಇಲ್ಲದೇ ವರ್ತಿಸದೇ ಪದೇ ಪದೆ ವಿವಾದಗಳನ್ನ ಮೈಮೇಲೆ ಎಳೆದು ಕೊಳ್ತಿದ್ದಾರೆ.
ಈ ಹಿಂದೆ ಪಾದರಾಯನಪುರದ ಪುಂಡರು ಜೈಲಿಂದ ಬಿಡುಗಡೆಯಾದಾಗ ಸ್ವಯಂ ಹೋಗಿ ಜಮೀರ್ ಕರೆ ತಂದು ಗಲಾಟೆ ವಿಚಾರದಲ್ಲಿ ಪುಂಡರಿಗೆ ರಾಜಾತಿಥ್ಯ ನೀಡಿ ಟೀಕೆಗೆ ಒಳಗಾಗಿದ್ದರು.