ಬೆಂಗಳೂರು: ಕನ್ನಡ ನಾಮಫಲಕ ಬಳಸದ ಮಾಲ್ಗಳ ಮಳಿಗೆಗಳ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ನಡೆಸಿ ಮಳಿಗೆಗಳನ್ನು ಮುಚ್ಚಿಸಿರುವ ಘಟನೆ ಇಂದು ನಗರದಲ್ಲಿ ನಡೆದಿದೆ.
ಸುಮಾರು ಒಂದೂವರೆ ತಿಂಗಳು ಕಾಲಾವಕಾಶ ನೀಡಿದ ಬಳಿಕವೂ ಮಂತ್ರಿ ಹಾಗೂ ಒರಾಯನ್ ಮಾಲ್ಗಳ ಮಳಿಗೆಗಳಲ್ಲಿ ಇಂಗ್ಲಿಷ್ ನಾಮಫಲಕಗಳೇ ರಾರಾಜಿಸುತ್ತಿರುವ, ಕನ್ನಡ ಕಡೆಗಣಿಸಿರುವ ಮಳಿಗೆಗಳಿಗೆ ಅಧಿಕಾರಿಗಳು ಶಟರ್ ಎಳೆದಿದ್ದಾರೆ. ಪಶ್ಚಿಮ ವಿಭಾಗದ ಆರೋಗ್ಯಾಧಿಕಾರಿ ಡಾ. ಬಾಲಸುಂದರ್ ನೇತೃತ್ವದಲ್ಲಿ ಮಾಲ್ಗಳ ಮೇಲೆ ದಾಳಿ ನಡೆಸಿ, ಮಂತ್ರಿಯಲ್ಲಿ ಐವತ್ತಕ್ಕೂ ಹೆಚ್ಚು ಮಳಿಗೆ ಹಾಗೂ ಒರಾಯನ್ನ ಮೂವತ್ತಕ್ಕೂ ಹೆಚ್ಚು ಅಂಗಡಿಗಳ ನಾಮಫಲಕ ಪರಿಶೀಲಿಸಲಾಯಿತು.
ಹಲವೆಡೆ ಅತಿಸಣ್ಣ ಅಕ್ಷರದಲ್ಲಿ ಕನ್ನಡ ಬಳಸಿದ್ದು, ಇನ್ನು ಕೆಲವೆಡೆ ಅಡ್ಡಾದಿಡ್ಡಿಯಾಗಿ ಕನ್ನಡ ನಾಮಫಲಕಗಳನ್ನು ಹಾಕಲಾಗಿತ್ತು. ಪಶ್ಚಿಮ ವಲಯದಲ್ಲಿ ಈವರೆಗೆ 9,828 ಅಂಗಡಿ ಮುಂಗಟ್ಟುಗಳಲ್ಲಿ 6,870 ಮಳಿಗೆಗಳು ಕನ್ನಡ ನಾಮಫಲಕ ಹಾಕಿವೆ. ಉಳಿದ ಮಳಿಗೆಗಳಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.