ಬೆಂಗಳೂರು: 2025 ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಟ್ಟು 6.23 ಲಕ್ಷ ಕೋಟಿ ರೂ. ಮೊತ್ತದ ವಿವಿಧ ಹೂಡಿಕೆಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೇ, ಇನ್ನೂ 4.03 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಉದ್ಯಮಿಗಳು ಘೋಷಣೆ ಮಾಡಿದ್ದಾರೆ.
ಇನ್ವೆಸ್ಟ್ ಕರ್ನಾಟಕ 2025 ಸಮಾರೋಪದ ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, "ಒಟ್ಟು 10,27,378 ಕೋಟಿ ರೂ. ಹೂಡಿಕೆ ಹರಿದು ಬಂದಿದೆ. ಈ ಪೈಕಿ 6.23 ಲಕ್ಷ ಕೋಟಿ ರೂ. ಮೊತ್ತದ ವಿವಿಧ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇನ್ನುಳಿದ 4.03 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಮಾಡುವುದಾಗಿ ವಿವಿಧ ಕಂಪನಿಗಳು ಇಂಗಿತ ವ್ಯಕ್ತಪಡಿಸಿವೆ. ಈ ಬಾರಿಯ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಲ್ಲಿ ಶೇ 75ದಷ್ಟು ಬೆಂಗಳೂರಿನ ಹೊರಗಿನ ಪ್ರದೇಶಗಳಿಗೆ ಹೂಡಿಕೆ ಆಗಿದೆ. ಶೇ 45 ಉತ್ತರ ಕರ್ನಾಟಕ ಭಾಗಕ್ಕೆ ಹೂಡಿಕೆ ಪ್ರಸ್ತಾವನೆ ಇದೆ" ಎಂದು ತಿಳಿಸಿದರು.
ನವೀಕರಿಸಬಹುದಾದ ಇಂಧನ ವಲಯದ್ದೇ ಹೆಚ್ಚಿನ ಪಾಲು: ಈ ಬಾರಿಯ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ ಹೆಚ್ಚಿನ ಹೂಡಿಕೆ ಹರಿದು ಬಂದಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಒಟ್ಟು 4.25 ಕೋಟಿ ರೂ. ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಿವೆ. ಈ ಪೈಕಿ 3.44 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಉಳಿದಂತೆ 81,356 ಕೋಟಿ ರೂ. ಮೊತ್ತದ ಹೂಡಿಕೆ ಮಾಡುವ ಸಂಬಂಧ ವಿವಿಧ ಕಂಪನಿಗಳು ಘೋಷಿಸಿವೆ. ಒಟ್ಟು ಹೂಡಿಕೆ ಪ್ರಸ್ತಾವನೆಗಳಲ್ಲಿ ಶೇ 41 ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆ ಮಾಡಲಾಗಿದೆ.
ಉತ್ಪಾದನಾ ಸನ್ರೈಸ್ ವಲಯವಾದ ಆಟೋ/ಇವಿ, ಏರೋ ಸ್ಪೇಸ್ ಹಾಗೂ ಡಿಫೆನ್ಸ್, ಇಲೆಕ್ಟ್ರಾನಿಕ್ ಸಿಸ್ಟಮ್, ಜಿಸಿಸಿಯಲ್ಲಿ ಸುಮಾರು 1.38 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆಗಳ ಪ್ರಸ್ತಾವನೆ ಬಂದಿದೆ. ಉತ್ಪಾದನೆ ಸಾಮಾನ್ಯ ವಲಯವಾದ ಆಹಾರ ಮತ್ತು ಅಗ್ರಿ, ಜವಳಿ, ಫಾರ್ಮಾ, ಮೆಷಿನ್ ಟೂಲ್ಸ್ ಮುಂತಾದ ಕ್ಷೇತ್ರದಲ್ಲಿ 1.05 ಲಕ್ಷ ಕೋಟಿ ರೂ. ಹೂಡಿಕೆಯ ಪ್ರಸ್ತಾವನೆ ಬಂದಿದೆ. ಉಕ್ಕು ಹಾಗೂ ಸಿಮೆಂಟ್ ಕ್ಷೇತ್ರಗಳಲ್ಲಿ ಸುಮಾರು 1.59 ಲಕ್ಷ ಕೋಟಿ ರೂ. ಹೂಡಿಕೆಯ ಪ್ರಸ್ತಾವನೆ ಬಂದಿದೆ. ಇನ್ನು ಮೂಲಸೌಕರ್ಯ ಮತ್ತು ಕೈಗಾರಿಕೆ/ಲಾಜಿಸ್ಟಿಕ್ ವಲಯದ ವಿವಿಧ ಕಂಪನಿಗಳಿಂದ 1.07 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 89,868 ಕೋಟಿ ರೂ. ಮೊತ್ತದ ಸ್ಟಾರ್ಟ್ ಅಪ್ ಹೂಡಿಕೆಗಳ ಪ್ರಸ್ತಾವನೆ ಬಂದಿದೆ.
ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದೆ: ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಕರ್ನಾಟಕ ರಾಜ್ಯದ ಇತಿಹಾಸ ದೇಶಕ್ಕೆ ಮಾದರಿ. ರಾಜ್ಯದಲ್ಲಿನ ವಾತಾವರಣ, ಮಾನವ ಸಂಪನ್ಮೂಲ, ಶಿಕ್ಷಣ ಇಡೀ ದೇಶದಲ್ಲಿ ಇಲ್ಲ ಎಂದು ಉದ್ಯಮಿಗಳು ಹೇಳಿದ್ದಾರೆ. ಈ ಬಾರಿ ಜಿಮ್ನಲ್ಲಿ ಎಂ.ಬಿ.ಪಾಟೀಲ್ ತಂಡ ಚರ್ಚೆ ಮಾಡಿ ಹೂಡಿಕೆಗಳನ್ನು ಬಿಯಾಂಡ್ ಬೆಂಗಳೂರು ತೆಗೆದುಕೊಂಡು ಹೋಗಲು ಒತ್ತು ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಮಂತ್ರಿಗಳೇ ಕರ್ನಾಟಕಕ್ಕೆ ಯಾವುದೇ ಹೋಲಿಕೆ ಇಲ್ಲ ಎಂದು ಹೇಳಿದ್ದಾರೆ. ಏಕಗವಾಕ್ಷಿ ವ್ಯವಸ್ಥೆಯನ್ನು ಸುಧಾರಿಸುವ ಕೆಲಸ ಮಾಡಲಾಗುತ್ತದೆ" ಎಂದರು.
"ನಮ್ಮ ರಾಜ್ಯ ತೆರೆದ ಮನಸ್ಸಿನಲ್ಲಿ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಿದ್ದೇವೆ. ಒನ್ ನೇಷನ್ ಒನ್ ಗ್ರಿಡ್ ಇರುವುದರಿಂದ ಹೆಚ್ಚಿನ ಹೂಡಿಕೆ ಇಂಧನ ಕ್ಷೇತ್ರಕ್ಕೆ ಬಂದಿದೆ. ಇದು ಅಂತಿಮ ಅಲ್ಲ, ಇದು ಆರಂಭವಾಗಿದೆ. ಇನ್ನೂ ಹೆಚ್ಚಿನ ಎಂಒಯು ಹೂಡಿಕೆಗಳು ಬರಲಿದೆ. ನಾವು ಜಿಮ್ ಮೂಲಕ ನಾವು ನೆರೆ ರಾಜ್ಯದ ಜೊತೆ ಸ್ಪರ್ಧೆ ಮಾಡುತ್ತಿಲ್ಲ. ನಾವು ಜಾಗತಿಕವಾಗಿ ಸ್ಪರ್ಧೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.
"ನಂಜುಡಪ್ಪ ವರದಿ ಆಧಾರದ ಮೇಲೆ ಬಂಡವಾಳ ಹೂಡಿಕೆಯಲ್ಲಿ ಪ್ರೋತ್ಸಾಹಧನ, ಕಾರ್ಯಕ್ಷಮತೆ ಆಧಾರದ ಮೇಲೂ ಆರ್ಥಿಕ ನೆರವು ನೀಡಲು ಮುಂದಾಗಿದ್ದೇವೆ. ಜತೆಗೆ ಅವರಿಗೆ ಭೂಮಿ ಒದಗಿಸಲು ಮುಂದಾಗಿದ್ದೇವೆ. ಇನ್ನು ಮಹಿಳೆಯರಿಗೆ ಆದ್ಯತೆ ನೀಡಲು ಶೇ.5ರಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಇನ್ನು ಹಸಿರು ಇಂಧನ ಮೂಲಕ ಸಂಸ್ಥೆ ರೂಪಿಸುವವರಿಗೆ ಶೇ.5ರಷ್ಟು ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಲಾಗಿದೆ" ಎಂದು ಹೇಳಿದರು.
"ವಿದ್ಯುತ್ ಚಾಲಿತ ವಾಹನಕ್ಕಾಗಿ ಸ್ವಚ್ಛ ಸಂಚಾರ ನೀತಿ ಬಿಡುಗಡೆ ಮಾಡಿದ್ದೇವೆ. ಪ್ರವಾಸೋದ್ಯಮ ನೀತಿ ಮೂಲಕ ಒತ್ತು ನೀಡಿದ್ದೇವೆ. ಐಟಿ ಬಿಟಿ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್ ಉದ್ಯಮ ಸ್ಥಾಪಿಸಲು ಮುಂದೆ ಬಂದಿದ್ದಾರೆ. ಫಾಕ್ಸ್ ಕಾನ್ ಸಂಸ್ಥೆಯವರು ದೊಡ್ಡಬಳ್ಳಾಪುರದ ಬಳಿ ತಮ್ಮ ಕಂಪನಿ ಆರಂಭಿಸಲಿದ್ದು, 40 ಸಾವಿರ ಜನರಿಗೆ ಉದ್ಯೋಗ ನೀಡಲಿದ್ದಾರೆ. ಸಂಶೋಧನೆ ಹಾಗೂ ಅಭಿವೃದ್ಧಿ ಮಾಡುವವರಿಗೆ ಶೇ.10ರಷ್ಟು ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೇವೆ. ನಾವು ಇನ್ನೋವೇಷನ್ ಎಕ್ಸಿಬಿಷನ್ ಆಯೋಜಿಸಿದ್ದೇವೆ" ಎಂದರು.
ಪ್ರಮುಖ ಹೂಡಿಕೆ ಘೋಷಣೆಗಳು ಯಾವುವು?:
ಕಂಪನಿ | ಹೂಡಿಕೆ ಘೋಷಣೆ |
ಜೆಎಸ್ಡಬ್ಲ್ಯು ಗ್ರೂಪ್ | 1.20 ಲಕ್ಷ ಕೋಟಿ ರೂ |
ಬಲ್ದೋಟಾ ಸ್ಟೀಲ್ ಆ್ಯಂಡ್ ಪವರ್ ಲಿ | 54,000 ಕೋಟಿ ರೂ |
ವೊಲ್ವೊ ಸಂಸ್ಥೆ | 1,400 ಕೋಟಿ ರೂ |
ಲ್ಯಾಮ್ ರಿಸರ್ಚ್ | 10,000 ಕೋಟಿ ರೂ |
ಸಮ್ವರ್ಧನಾ ಮಧರ್ ಸನ್ | 3,700 ಕೋಟಿ ರೂ. |
ಹೋಂಡಾ ಇವಿ | 600 ಕೋಟಿ ರೂ. |
ಇಂಟರ್ನೇಷನಲ್ ಬ್ಯಾಟರಿ ಕಂ | 390 ಕೋಟಿ ರೂ. |
ಸುಸ್ಲಾನ್ ಎನರ್ಜಿ | 21,950 ಕೋಟಿ ರೂ |
ಟಿವಿಎಸ್ ಮೊಟಾರ್ ಕಂ | 2,000 ಕೋಟಿ ರೂ |
ಹಿಟಾಚಿ ಎನರ್ಜಿ | 1,000 ಕೋಟಿ ರೂ. |
ಹೇವೆಲ್ಸ್ | 710 ಕೋಟಿ ರೂ. |
ಹಿರೋ ಫ್ಯುಚರ್ ಎನರ್ಜಿ | 22,200 ಕೋಟಿ ರೂ |
ಶ್ರೀ ಸಿಮೆಂಟ್ ಲಿ | 8,350 ಕೋಟಿ ರೂ |
ಎಪ್ಸಿಲಾನ್ ಗ್ರೂಪ್ | 15,350 ಕೋಟಿ ರೂ |
ಮಹೀಂದ್ರ ಸುಸ್ಟೆನ್ ಪ್ರೈ.ಲಿ | 36,000 ಕೋಟಿ ರೂ |
ಇದನ್ನೂ ಓದಿ: ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುತ್ತಿದೆ: ಡಿ.ಕೆ.ಶಿವಕುಮಾರ್
ಇದನ್ನೂ ಓದಿ: ಗೌರಿಬಿದನೂರು, ಧಾರವಾಡ, ಹಾರೋಹಳ್ಳಿಯಲ್ಲಿ ಇ.ವಿ ಕ್ಲಸ್ಟರ್ ಸ್ಥಾಪನೆ; 1 ಲಕ್ಷ ಉದ್ಯೋಗ ಸೃಷ್ಟಿ