ಬೆಂಗಳೂರು: ಭೂಗತ ಪಾತಕಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಸಾಮಾಜಿಕ ಹೋರಾಟಗಾರ ರವಿ ಶೆಟ್ಟಿ ಬೈಂದೂರು ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ.
![A threat call from an underworld don to social worker ravi shetty bydoor](https://etvbharatimages.akamaized.net/etvbharat/prod-images/13175951_fgrthy.jpg)
ಶನಿವಾರ ಮಧ್ಯಾಹ್ನ ಮಂಗಳಮುಖಿಯರ ಪರವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ, ನಾನು ಅಂಡರ್ವರ್ಲ್ಡ್ ಡಾನ್ ಕಲಿ ಯೋಗೇಶ್ ಎಂದು ಹೇಳಿಕೊಂಡ ವ್ಯಕ್ತಿ ಇಂಟರ್ನೆಟ್ ಕರೆ ಮೂಲಕ ಮಾತನಾಡಿ ಬೆದರಿಕೆ ಹಾಕಿದ್ದಾನೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಸಂಘಟನೆಯ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೋಳ ಸೊಸೈಟಿ ಪರವಾಗಿ ಬೆದರಿಕೆ ಕರೆ:
ಕರಾವಳಿಯ ಬೋಳ ಸಹಕಾರಿ ವ್ಯವಸಾಯ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತು ಅಕ್ರಮ ಕಲ್ಲು ಕ್ವಾರಿಗಳ ವಿರುದ್ಧ ಹೋರಾಟದ ಸಂಬಂಧ ಈ ಬೆದರಿಕೆ ಕರೆ ಬಂದಿದೆ. ಬೋಳ ಸೊಸೈಟಿ ವಿಷಯಕ್ಕೆ ಹೋದರೆ ಸರಿ ಇರುವುದಿಲ್ಲ. ನಿನ್ನಷ್ಟಕ್ಕೆ ನೀನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ಒಂದು ಗತಿ ಕಾಣಿಸುತ್ತೇನೆ. ನಾನು ಅಂಡರ್ವರ್ಲ್ಡ್ ಡಾನ್ ಕಲಿ ಯೋಗೇಶ್. ನಾನು ಯಾರು ಅಂತ ಗೊತ್ತಾಗಬೇಕು ಎಂದರೆ ಗೂಗಲ್ನಲ್ಲಿ ಸರ್ಚ್ ಮಾಡು ಎಂದು ಕರೆ ಮಾಡಿರುವ ವ್ಯಕ್ತಿ ಬೆದರಿಸಿರುವುದು ಕೂಡ ವಾಯ್ಸ್ ಕ್ಲಿಪ್ನಲ್ಲಿ ಸ್ಪಷ್ಟವಾಗಿದೆ ಎಂದು ರವಿ ಶೆಟ್ಟಿ ಬೈಂದೂರ್ 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
![social worker ravi shetty bydoor](https://etvbharatimages.akamaized.net/etvbharat/prod-images/13175951_gfhth.jpg)
ಅವ್ಯವಹಾರ:
ಸೊಸೈಟಿಯಲ್ಲಿ ಅವ್ಯವಹಾರ ನಡೆದಿರುವುದರಿಂದ ಒಬ್ಬ ಸಾಮಾಜಿಕ ಹೋರಾಟಗಾರನಾಗಿ ನ್ಯಾಯಕ್ಕಾಗಿ ಆಗ್ರಹಿಸಿ ಮಧ್ಯಪ್ರವೇಶಿಸಿದ್ದೇನೆ ಎಂದು ರವಿ ಶೆಟ್ಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ತಾನು ಬೆಳೆದ ಬೆಳೆ ಸಮೇತ ಸಿಎಂ ಭೇಟಿಗೆ ಆಗಮಿಸಿದ ಬೆಳಗಾವಿ ರೈತ - ಕಾರಣ?
ನೀನೊಬ್ಬನೇ ಸಾಮಾಜಿಕ ಹೋರಾಟಗಾರ ಅಲ್ಲ, ಬೋಳ ಸೊಸೈಟಿ ತಂಟೆಗೆ ಹೋದರೆ ಹುಡುಗರನ್ನು ಕಳುಹಿಸಿ ಕಾಡಿನೊಳಗೆ ಹೊಡೆಸಿ ಬಿಡುತ್ತೇನೆ ಎಂಬುದು ಬೆದರಿಕೆ ಕರೆಯಲ್ಲಿ ದಾಖಲಾಗಿದ್ದು, ಈ ಸಂಬಂಧ ದೂರು ಸಲ್ಲಿಸಿದ್ದೇನೆ. ಈಗ ಪೊಲೀಸ್ ಭದ್ರತೆ ಕೂಡ ನೀಡಲಾಗಿದ್ದು, ಎರಡು ಮೂರು ದಿನ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ ಎಂದು ರವಿ ಶೆಟ್ಟಿ ತಿಳಿಸಿದರು.
ದೂರು, ತನಿಖೆ:
ಈ ಸಂಬಂಧ ರಕ್ಷಣೆ ಕೋರಿ ರವಿ ಶೆಟ್ಟಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿದ್ದೇವೆ. ಆರೋಪಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ. ಹಲವರಿಗೆ ಬೆದರಿಸಿರುವ ಸಂಬಂಧ ದೂರುಗಳು ದಾಖಲಾಗಿವೆ. ಈ ಬಗ್ಗೆ ನಿಗಾ ವಹಿಸಿದ್ದು, ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲ್ಲಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.