ಬೆಂಗಳೂರು : ಕೋರ್ಟ್ನಿಂದ ತಡೆಯಾಜ್ಞೆ ಪಡೆದಿರುವ ಸಚಿವರ ರಾಜೀನಾಮೆಗೆ ಪಟ್ಟುಹಿಡಿದಿರುವ ಕಾಂಗ್ರೆಸ್ ಸದಸ್ಯರು ಇಂದೂ ಕೂಡಾ ವಿಧಾನಸಭೆಯಲ್ಲಿ ಧರಣಿ ಮುಂದುವರೆಸಿದರು. ಈ ಪ್ರಕರಣವನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ನಿರ್ದೇಶನದಂತೆ ತನಿಖೆ ನಡೆಸುವಂತೆ ಪಟ್ಟು ಹಿಡಿದರು.
ಸರ್ಕಾರ ಸಮರ್ಪಕ ಉತ್ತರ ನೀಡಿಲ್ಲವೆಂದು ಕಾಂಗ್ರೆಸ್ ಧರಣಿ ಮುಂದುವರಿಸಿ, ಲಜ್ಜೆಗೆಟ್ಟ ಸರ್ಕಾರ ಎಂದು ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರು. ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದಕ್ಕೂ ಮುನ್ನ ಸ್ಪೀಕರ್ ಕಾಗೇರಿ ಅವರು, ನಿನ್ನೆ ನಿಧನರಾದ ಸಕಲೇಶಪುರದ ಮಾಜಿ ಶಾಸಕರು ಹಾಗೂ ಮಾಜಿ ಸಚಿವ ಬಿ.ಡಿ ಬಸವರಾಜು ನಿಧನಕ್ಕೆ ಸಂತಾಪ ಸೂಚಿಸಿದರು.
ಸಂತಾಪ ಸೂಚನೆ ಮುಗಿದ ಕೂಡಲೇ ಕಾಂಗ್ರೆಸ್ ಸದಸ್ಯರು ಧರಣಿ ಆರಂಭಿಸಿದರು. ಪ್ರಶ್ನೋತ್ತರ ಅವಧಿ ಮುಗಿಯಲಿ ಆ ಮೇಲೆ ಚರ್ಚೆ ಮಾಡಿ ಎಂದು ಸ್ಪೀಕರ್ ಹೇಳಿದರೂ, ಸದಸ್ಯರು ಮಾತು ಕೇಳಲಿಲ್ಲ. ಸದನ ತಹಬದಿಗೆ ಬಾರದಿದ್ದಾಗ ಸ್ಪೀಕರ್ ಸದನವನ್ನು ಕೆಲ ಸಮಯ ಮುಂದೂಡಿದರು.
ಓದಿ : ಸದನದಲ್ಲಿ ‘ಸಿಡಿ’ದೆದ್ದ ಪ್ರತಿಪಕ್ಷ... ‘ಕೈ’ಯಲ್ಲಿ ‘ಸಿಡಿ’ ಹಿಡಿದು ಪ್ರತಿಭಟಿಸಿದ ನಾಯಕರು
ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಯಲ್ಲಿ ಸಂಧಾನ ಸಭೆ ನಡೆಯುತ್ತಿದ್ದು, ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊನ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಪಕ್ಷದ ಸಚೇತಕ ಅಜೆಯ್ ಧರ್ಮಸಿಂಗ್, ಎಚ್.ಕೆ.ಪಾಟೀಲ್ ಸಭೆಯಲ್ಲಿ ಭಾಗಿಯಾಗಿದ್ದರು. ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ ಮುಂದುವರೆದಿದೆ.