ಬೆಂಗಳೂರು: ಪ್ರವಾಹದಿಂದ ಎಂಟು ಸಾವಿರ ಕೋಟಿ ರೂ. ಮೊತ್ತದ ರಸ್ತೆಗಳು, ಸೇತುವೆಗಳು ಹಾನಿಯಾಗಿದ್ದು ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಲು 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿಯ 645 ಕಿ.ಮೀ. ಉದ್ದದ ರಸ್ತೆ, ರಾಜ್ಯ ಹೆದ್ದಾರಿಯ 1,166 ಕಿ.ಮೀ., ಜಿಲ್ಲಾ ಸಂಪರ್ಕಿಸುವ 2,341 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿವೆ ಎಂದು ವಿವರಿಸಿದರು.
ಇನ್ನು ರಾ.ಹೆದ್ದಾರಿಯ 34 ಸೇತುವೆ, ರಾಜ್ಯ ಹೆದ್ದಾರಿಯ 432, ಜಿಲ್ಲಾ ಸಂಪರ್ಕ ರಸ್ತೆಗಳಲ್ಲಿನ 696 ಸೇತುವೆಗಳು ಹಾನಿಗೊಳಗಾಗಿವೆ. ಒಟ್ಟು ಹಾನಿಯಾಗಿರುವ ಮೊತ್ತ 8 ಸಾವಿರ ಕೋಟಿ ರೂ. ತುರ್ತಾಗಿ 500 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜೊತೆಗೆ ರಸ್ತೆಗಳ ನಿರ್ವಹಣೆಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಇನ್ನು ಸಹಾಯಕ ಇಂಜಿನಿಯರ್ಗಳು ಕಡ್ಡಾಯವಾಗಿ ಬೆಳಗ್ಗೆ ಸೈಟ್ ವಿಸಿಟ್ ಹೋಗಬೇಕು. ಮಧ್ಯಾಹ್ನ ಕಚೇರಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಪ್ರತಿಯೊಬ್ಬ ಅಧಿಕಾರಿಯೂ ತಿಂಗಳ ವರದಿ ನೀಡಬೇಕು. ಅಧಿಕಾರಿಗಳು ಆಫಿಸ್ ಹೆಡ್ ಕ್ವಾಟರ್ನಲ್ಲಿಯೇ ವಾಸ್ತವ್ಯ ಹೂಡಬೇಕು ಎಂದು ಖಡಕ್ ಸೂಚನೆ ನೀಡಿದರು.
ರಾಜ್ಯದಲ್ಲಿ ರಸ್ತೆ ಅಪಘಾತದಲ್ಲಿಯೇ ಬಹಳಷ್ಟು ಮಂದಿ ಸಾಯುತ್ತಿದ್ದಾರೆ. ಹೀಗಾಗಿ ಅವೈಜ್ಞಾನಿಕ ರೋಡ್ ಹಂಪ್ಸ್ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 10 ಸಾವಿರ ಕೋಟಿ ರೂ. ಅನುದಾನ ಇಲಾಖೆಯಲ್ಲಿದ್ದು, ಬಿಲ್ ಬಾಕಿ ಮೊತ್ತ 2,500 ಕೋಟಿ ರೂ. ಇದೆ. ರಸ್ತೆ, ಸೇತುವೆಗಳು ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿರುವುದರಿಂದ ಈ ಬಾರಿ ಕೆಲವು ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಇನ್ನು ರಾಷ್ಟ್ರ ರಾಜಕಾರಣದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸಕ್ರೀಯರಾಗಿರುವವರೆಗೂ ಬಿಜೆಪಿ ಅಧಿಕಾರದಲ್ಲಿರುತ್ತದೆ. ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿಕ್ರಿಯಿಸುತ್ತಾ, ಕಾಂಗ್ರೆಸ್ ನವರಿಗೆ ಮುಂದಿನ 10 ವರ್ಷ ಪ್ರತಿಭಟನೆ ಮಾಡುವುದೇ ಕೆಲಸ. ಅರವತ್ತು ವರ್ಷ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಿದ್ದಾರೆ. ಇನ್ನು ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಷ್ಟೇ ಅವರ ಕೆಲಸ ಎಂದು ಟೀಕಿಸಿದರು.