ಬಳ್ಳಾರಿ: ಜಿಂದಾಲ್ ಕಂಪನಿಗೆ ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್ಗೆ ನೀಡಿದ 3700 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಮಾರಾಟ ಮಾಡಲು ಮುಂದಾದರೆ ಕರ್ನಾಟಕ ಜನಸೈನ್ಯ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಸಂಘಟನೆ ರಾಜ್ಯಾಧ್ಯಕ್ಷ ಕೆ.ಎರಿಸ್ವಾಮಿ ಎಚ್ಚರಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಜಿಂದಾಲ್ ಕಂಪನಿಗೆ ಸರ್ಕಾರ ಲೀಜ್ ಆಫ್ ಅಗ್ರಿಮೆಂಟ್ ಅಡಿಯಲ್ಲಿ ಜಮೀನಿಗಳನ್ನು ನೀಡಿತ್ತು. ಅದರಲ್ಲಿ ಬಳ್ಳಾರಿ, ಸಂಡೂರು, ಕುರೆಕೊಪ್ಪ ಗ್ರಾಮದ ರೈತರ ಭೂಮಿಗಳನ್ನು ಒಂದು ಎಕರೆಗೆ 1 ಲಕ್ಷದ 22 ಸಾವಿರದಂತೆ ನೀಡಿದೆ. ಈಗ ಸರ್ಕಾರ, ಲೀಜ್ನ ಭೂಮಿಗಳನ್ನು ಜಿಂದಾಲ್ಗೆ ಮಾರಾಟ ಮಾಡಲು ಮುಂದಾಗಿದ್ದು, ಜಿಂದಾಲ್ ಕಂಪನಿಯ ಪರವಾಗಿ ಶುದ್ಧ ಕ್ರಯ ಪತ್ರವನ್ನು ಮಾಡಿಕೊಡಲು ರಾಜ್ಯ ಸಚಿವ ಸಂಪುಟ ಸಭೆಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಜಮೀನಿನಲ್ಲಿ ಜಿಂದಾಲ್ ಕಂಪನಿಯು ಏನನ್ನು ಮಾಡಲು ಸರ್ಕಾರದಿಂದ ಪಡೆದಿತ್ತೋ ಅದನ್ನು ಹಾಗೇ ಲೀಜ್ ಆಫ್ ಅಗ್ರಿಮೆಂಟ್ ಪ್ರಕಾರ ಮುಂದುವರೆಸಿಕೊಂಡು ಹೋಗಬೇಕೇ ಹೊರತು ಯಾವುದೇ ಕಾರಣಕ್ಕೂ ನಮ್ಮ ನೆಲವನ್ನು ಜಿಂದಾಲ್ಗೆ ಮಾರಾಟ ಮಾಡಲು ಬಿಡುವುದಿಲ್ಲ. ಒಂದು ವೇಳೆ ರಾಜ್ಯ ಸರ್ಕಾರ ಜಿಂದಾಲ್ಗೆ ಭೂಮಿ ಮಾರಾಟ ಮಾಡಿದ್ದೇ ಆದಲ್ಲಿ ಕರ್ನಾಟಕ ಜನಸೈನ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದರು.
ಮೇಲ್ಸೇತುವೆ ನಿರ್ಮಾಣ ಮಾಡಿ:
ಜಿಂದಾಲ್ ಕಂಪನಿ ಸಂಡೂರ ತೋರಣಗಲ್ಲು ಮಾರ್ಗವಾಗಿ ರೈಲ್ವೆ ಗೇಟ್ ನಿರ್ಮಾಣ ಮಾಡಿದರೆ ಗೇಟ್ ಹಾಕಿದಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಆ್ಯಂಬುಲೆನ್ಸ್ ಹಾಗೂ ತುರ್ತುಪರಿಸ್ಥಿತಿ ಸೇವೆಗೆ ಅಡ್ಡಿಯಾಗಲಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಾಣ ಮಾಡಿ ಎಂದು ಎರಿಸ್ವಾಮಿ ಆಗ್ರಹಿಸಿದರು.