ಬಳ್ಳಾರಿ: ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಕೌಲ್ ಬಜಾರ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತನಿಂದ 10.50 ಲಕ್ಷ ರೂ. ಮೌಲ್ಯದ 225 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಯಾಳ್ಪಿ ಗ್ರಾಮದ ಓಬಲೇಶ್ ಬಂಧಿತ ಆರೋಪಿ. ಕೌಲ್ ಬಜಾರ್ ಪ್ರದೇಶದ ಬಾಬು ಚೌಕ್ ಬಳಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೆ.ಎಚ್.ಬಿ ಕಾಲೋನಿ, ಜಾಗೃತಿ ನಗರ, ಕೆ.ಇ.ಬಿ ಕಚೇರಿ ಎದುರುಗಡೆ, ರೇಡಿಯೋ ಪಾರ್ಕ್ ಪ್ರದೇಶ ಸೇರಿ ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಪಿಐ ಸುಭಾಷ್ ಚಂದ್ರ, ಪಿಎಸ್ಐ ರಘು , ವಿಜಯಲಕ್ಷ್ಮಿ, ವಲಿಬಾಷಾ, ಕೆ.ನಾಗರಾಜ್, ಅನ್ವರ್ ಬಾಷಾ, ರಾಮದಾಸ್, ಕೆ.ಎನ್ ಸೋಮಪ್ಪ, ಎಚ್.ರಾಮಲಿಂಗಪ್ಪ, ಎಂ. ರಾಜ, ಬಿ.ಸಿದ್ದೇಶ್ ಪಾಲ್ಗೊಂಡಿದ್ದರು.