ಚಿಕ್ಕೋಡಿ : ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ನೀರಿನ ಹರಿವಿನ ಪ್ರಮಾಣ ಮಾತ್ರ ಹೆಚ್ಚಾಗಿದೆ. ಹೀಗಾಗಿ ಗಡಿ ಭಾಗದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟ ಏರಿಕೆಯಾಗಿದೆ.
ಕಳೆದ ಹದಿನೈದು ದಿನಗಳಿಂದ ಮಹಾರಾಷ್ಟ್ರದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ, ವೇದಗಂಗಾ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿ ಅಪಾಯದ ಮಟ್ಟ ಮೀರಿ ನದಿಗಳು ಮೈದುಂಬಿ ಹರಿಯುತ್ತಿವೆ.
ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದ್ದರಿಂದ ಕೆಳ ಹಂತದ ಆರು ಸೇತುವೆಗಳು ಮುಳುಗಡೆಯಾಗಿವೆ. ಹೀಗಾಗಿ ಜನ ಸಂಕಷ್ಟಕ್ಕೀಡಾಗಿದ್ದು, ಸುತ್ತು ಬಳಸಿ ಪರ್ಯಾಯ ಮಾರ್ಗದಿಂದ ಸಂಚರಿಸಬೇಕಾಗಿದೆ.
ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿರುವ ಪರಿಣಾಮ ಚಿಕ್ಕೋಡಿ ತಾಲೂಕಿನ ನದಿ ತೀರದ ಪ್ರದೇಶಗಳ ಬೆಳೆಗಳಲ್ಲಿ ನೀರು ಪ್ರವೇಶಿಸಿದ್ದು. ಪ್ರಮುಖ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ಕಬ್ಬು, ಬಾಳೆ, ಸೋಯಾಬಿನ್, ಶೇಂಗಾ, ಮೆಕ್ಕೆ ಜೋಳ ಸೇರಿದಂತೆ ಪ್ರಮುಖ ಬೆಳೆಗಳಲ್ಲಿ ನೀರು ಹೋಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ, ಚಂದೂರ, ಇಂಗಳಿ, ಯಡೂರ, ಮಾಂಜರಿ, ಸೇರಿದಂತೆ ಗ್ರಾಮಗಳ ನದಿ ತೀರದಲ್ಲಿ ಹೊಲ-ಗದ್ದೆಗಳಲ್ಲಿ ನೀರು ಹೋಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಸಾವಿರಾರು ರೂಪಾಯಿ ವೆಚ್ಚದಲ್ಲಿ ಬೆಳೆದ ಬೆಳೆಗಳು ನೀರು ಪಾಲಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಇತ್ತ ಹಿಪ್ಪರಗಿ ಡ್ಯಾಂನಿಂದ 90,000 ಕ್ಯೂಸೆಕ್ ನೀರು ಹರಿಬಿಡುವುತ್ತಿರುವುದರಿಂದ ಚಿಕ್ಕೋಡಿ ಉಪ ವಿಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ಚಿಕ್ಕೋಡಿ ತಹಸೀಲ್ದಾರ ಸಂತೋಷ ಬಿರಾದರ.
ಒಟ್ಟಿನಲ್ಲಿ ಬೇಸಿಗೆ ಬಂದ್ರೆ ನದಿಯಲ್ಲಿ ನೀರು ಇಲ್ಲದೆ ಈ ಭಾಗದ ರೈತರು ಪರದಾಡುತ್ತಾರೆ. ಮಳೆಗಾಲದಲ್ಲಿ ಮಳೆಯಿಂದಾಗಿ ಬೆಳೆದ ಬೆಳೆಗಳು ಹಾಳಾಗುತ್ತಿದ್ದು, ಇಲ್ಲಿನ ರೈತರಿಗೆ ಸರ್ವಕಾಲುವೂ ಸಂಕಷ್ಟವೇ ಎಂಬಂತಾಗಿದೆ.