ಚಿಕ್ಕೋಡಿ: ದಿನದಿಂದ ದಿನಕ್ಕೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಪರಿಹಾರ ಮಾರ್ಗ ಕಂಡುಹಿಡಿಯಲು ಜಮಖಂಡಿ ಮತ್ತು ಕಾಗವಾಡ ಶಾಸಕರು ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರ ಜೊತೆ ಸಮಾಲೋಚನೆ ನಡೆಸಿದ್ದಾರೆ.
ಜಮಖಂಡಿ ಮತ್ತು ಕಾಗವಾಡ ಶಾಸಕರಾದ ಆನಂದ ಸಿದ್ದು ನ್ಯಾಮಗೌಡ ಹಾಗೂ ಶ್ರೀಮಂತ ಪಾಟೀಲ ಮುಂಬೈಗೆ ತೆರಳಿ ಮಹಾರಾಷ್ಟ್ರದ ನೀರಾವರಿ ಸಚಿವರಾದ ಗಿರೀಶ್ ಮಹಾಜನ್ ಅವರನ್ನು ಭೇಟಿಯಾಗಿ, ಕೃಷ್ಣಾ ತೀರದ ಜನರಿಗೆ ಇರುವ ನೀರಿನ ಅಭಾವನ್ನು ವಿವರಿಸಿದ್ದಾರೆ. ಕೋಯ್ನಾ ಜಲಾಶಯದಿಂದ 2 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ನೀರು ಹರಿಸಬೇಕೆಂದು ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ನೀರಾವರಿ ಸಚಿವರಿಂದ ಅತ್ಯಂತ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ನೀರು ಬಿಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಜಮಖಂಡಿ ಶಾಸಕರು ಈಟಿವಿ ಭಾರತಕ್ಕೆ ತಿಳಿಸಿದರು.