ಬೆಳಗಾವಿ: ಮಹಾದಾಯಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ಖಂಡಿಸಿ ಜ. 16ರಂದು ರಾಜ್ಯದ ಎಲ್ಲಾ ಸಂಸದರ ಮನೆಯ ನಲ್ಲಿ ಕಿತ್ತು ಅವರಿಗೆ ನೀರಿನ ಮಹತ್ವವನ್ನು ತಿಳಿಸಿಕೊಡುವ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನಾ೯ಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ತಿಳಿಸಿದ್ದಾರೆ.
ಕನಾ೯ಟಕ-ಮಹಾರಾಷ್ಟ್ರ ಗಡಿ ವಿಷಯದಲ್ಲಿ ಬೆಳಗಾವಿಯ ರಾಜಕಾರಣಿಗಳು ನೀಚ ರಾಜಕಾರಣ ಮಾಡುತ್ತಿದ್ದಾರೆ. ಮರಾಠಿ ಮತಗಳಿಗಾಗಿ ತಾಯಿನಾಡಿಗೆ ದ್ರೋಹ ಬಗೆಯುತ್ತಿದ್ದಾರೆ. ಇವರು ಮಹಾರಾಷ್ಟ್ರ ರಾಜಕಾರಣಿಗಳಿಂದ ಸಾಕಷ್ಟು ಕಲಿಯಬೇಕಾಗಿದೆ. ಅಲ್ಲದೇ ಗಡಿ ವಿವಾದ ನೋಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೇಮಿಸಿದೆ. ತಕ್ಷಣ ರಾಜ್ಯದಲ್ಲಿಯೂ ಗಡಿ ವಿಷಯವನ್ನು ಚೆನ್ನಾಗಿ ಅಥ೯ಮಾಡಿಕೊಂಡಿರುವ ಬೆಳಗಾವಿಯ ಶಾಸಕರೊಬ್ಬರನ್ನು ಉಸ್ತುವಾರಿಯಾಗಿ ನೇಮಿಸಬೇಕು. ರೈಲ್ವೆ ಆಸ್ತಿ-ಪಾಸ್ತಿ ನಾಶಪಡಿಸುವ ಹೋರಾಟಗಾರರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಿ ಎಂದು ಕೇಂದ್ರ ಸಚಿವರು ಹೇಳಿಕೆ ನೀಡಿದ್ದಾರೆ. ಆದರೆ ಎಂಇಎಸ್ನವರು ಅನೇಕ ಬಾರಿ ಈ ತರದ ಕೃತ್ಯಗಳನ್ನು ಎಸಗಿದ್ದಾರೆ. ಆಗ ಎಲ್ಲಿ ಹೋಗಿತ್ತು ಸಂಸದರ ಪೌರುಷ ಎಂದು ಪ್ರಶ್ನಿಸಿದರು.
ಬೆಳಗಾವಿಯನ್ನ ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಹೋಲಿಸಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ರಾಜ್ಯ ಸರ್ಕಾರ ದೂರು ದಾಖಲಿಸಬೇಕು. ಕನ್ನಡ ಸಂಘಟನೆಗಳು ಬಾಳ ಠಾಕ್ರೆಗೂ ಉತ್ತರ ಕೊಟ್ಟಿದ್ದೇವೆ. ಅದೇ ರೀತಿ ಉದ್ಧವ್ ಠಾಕ್ರೆಗೂ ಉತ್ತರ ನೀಡುತ್ತೇವೆ. ಬೆಳಗಾವಿ ಸೂರ್ಯ-ಚಂದ್ರರು ಇರುವ ತನಕ ಕರ್ನಾಟಕದ ಅವಿಭಾಜ್ಯ ಅಂಗವಾಗಿರಲಿದೆ ಎಂದರು.