ಬೆಳಗಾವಿ : ನಮ್ಮಲ್ಲಿರುವಂತ ಬಡತನ, ಅಸಹಾಯಕತೆಗಳನ್ನು ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಸರ್ಕಾರ ಅದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಉದ್ಯಮಬಾಗ್ ಬಳಿ ವಿಶ್ವ ಹಿಂದು ಪರಿಷತ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮತಾಂತರ ನಿಷೇಧ ಕಾಯ್ದೆ ಆದಷ್ಟು ಬೇಗ ಜಾರಿಗೆ ತರುವ ಕೆಲಸವನ್ನು ಮಾಡಲಾಗುತ್ತದೆ. ರಾಜ್ಯದಾದ್ಯಂತ ಮುಗ್ಧ ಜನರನ್ನು ಮತಾಂತರ ಮಾಡಲಾಗುತ್ತಿದೆ. ಆರ್ಥಿಕ ಆಮಿಷ ಒಡ್ಡಿ ಮತಾಂತರ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದರು.
ಮತಾಂತರ ಕೇವಲ ನಂಬರ ಹೆಚ್ಚು ಕಡಿಮೆ ಮಾಡುವುದು ಅಲ್ಲ. ಮಾನಸಿಕತೆಯನ್ನ ಬದಲಾವಣೆ ಮಾಡಬೇಕು. ಮೊದಲು ಇದು ಆಮಿಷ ಆಗ್ತದೆ. ಆಮೇಲೆ ಇದು ರೋಗ ಆಗ್ತದೆ. ನಮ್ಮ ಸರ್ಕಾರ, ಸಮಾಜ, ದೇಶ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಮ್ಮಲ್ಲಿರುವಂತ ಬಡತನ, ಅಸಹಾಯಕತೆ ಇವುಗಳನ್ನು ದುರುಪೋಗ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಕಾನೂನು ಮುಖಾಂತರ ಆಸೆ ಆಮಿಷ, ಒತ್ತಾಯಗಳಿಗೆ ನಮ್ಮ ಸಂವಿಧಾನದಲ್ಲಿ ಅವಕಾಶ ಇಲ್ಲ. ಅದನ್ನ ತಡೆಹಿಡಿಯುವಂತಹ ಕಾನೂನು ನಾವು ಮಾಡಬೇಕಾಗಿದೆ. ಮತಾಂತರ ನಿಷೇಧ ಕಾನೂನು ಬರಬೇಕೋ ಬೇಡವೋ ಅಂತಾ ಚರ್ಚೆಗಳು ನಡೀತಾ ಇವೆ. ಯಾರು ಈ ಚರ್ಚೆ ಮಾಡ್ತಾ ಇದ್ದಾರೋ. ನಾವು ವಿರೋಧ ಅಂತಾ ಯಾರು ಹೇಳ್ತಾ ಇದ್ದಾರೋ ಅವರೇ 2019ರಲ್ಲಿ ಮತಾಂತರ ಕಾಯ್ದೆ ತರುವಂತಹ ಪ್ರಯತ್ನ ಮಾಡಿದ್ದರು. ಆದರೆ, ಮುಂದೆ ಅವರಿಗೆ ಅವರದೇ ಆದಂತಹ ರಾಜಕೀಯ ಹಿತಾಸಕ್ತಿ ನಿಂತಿದೆ ಎಂದರು.
'ಪ್ರಮುಖರನ್ನೇ ನಾವು ಅರೆಸ್ಟ್ ಮಾಡಿದ್ದೇವೆ'
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕರ್ನಾಟಕದಲ್ಲಿ ಯಾರು ಪುಂಡಾಟಿಕೆ ಮಾಡಿದ್ದಾರೆ. ಅವರುಗಳ ಪ್ರಮುಖರನ್ನೇ ನಾವು ಅರೆಸ್ಟ್ ಮಾಡಿದ್ದೇವೆ. ಹಿಂದಿನ ಸರ್ಕಾರಗಳು ಯಾವುದೇ ಕೆಲಸವನ್ನ ಮಾಡ್ತಾ ಇರಲಿಲ್ಲ. ಸುಮ್ಮನೇ ಅವರಿವರನ್ನ ಅರೆಸ್ಟ್ ಮಾಡ್ತಾ ಇದ್ದರು. ಆದರೆ, ನಾವು ಪ್ರಮುಖರನ್ನೇ ಅರೆಸ್ಟ್ ಮಾಡಿ ನಿಯಂತ್ರಣ ಮಾಡ್ತಾ ಇದ್ದೇವೆ. ಅದೇ ರೀತಿ ಮಹಾರಾಷ್ಟ್ರದ ಸರ್ಕಾರ ಜೊತೆಗೂ ನಮ್ಮ ಹೋಮ್ ಸೆಕ್ರೆಟರಿ ಮಾತಾಡಿದ್ದಾರೆ. ಕನ್ನಡಿಗರ ಆಸ್ತಿಪಾಸ್ತಿಗೆ ಹಾನಿ ಆಗದಂತೆ ಅವರ ರಕ್ಷಣೆ ಮಾಡಬೇಕು ಎಂದು ಹೇಳಿದರು.
ನಮ್ಮ ವಾಹನಗಳ ರಕ್ಷಣೆ ಮಾಡಬೇಕೆಂದು ಹೇಳಿದ್ದೇವೆ. ಇವತ್ತು ಕೂಡ ನಾನು ಅವರಿಗೆ ಹೇಳುತ್ತೇನೆ. ಇಲ್ಲಿ ಕೂಡ ಕಾನೂನು ಕೈಗೊಂಡವರ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳುತ್ತೇವೆ. ಸಿದ್ದರಾಮಯ್ಯನವರ ಗುಪ್ತಚರ ಇಲಾಖೆ ವೈಫಲ್ಯ ಹೇಳಿಕೆ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಸಿಎಂ ಜಾರಿಕೊಂಡರು.
ಇದನ್ನೂ ಓದಿ: ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದರ ಹಿಂದೆ ಎಂಇಎಸ್ ಇದೆ ಎಂದು ಹೇಳುವುದಿಲ್ಲ: ಡಿಕೆಶಿ