ಬೆಳಗಾವಿ: ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಬಿಜೆಪಿ ಸೇರ್ಪಡೆಗೊಂಡಿದ್ದು, ಈ ವಿಚಾರ ಖಾನಾಪುರ ಮೂಲ ಕಮಲ ಕಾರ್ಯಕರ್ತರಿಗೆ ಬಿಗ್ ಶಾಕ್ ನೀಡಿದೆ. ಅರವಿಂದ ಪಾಟೀಲ್ ಬಿಜೆಪಿ ಸೇರ್ಪಡೆ ಬಗ್ಗೆ ಜಿಲ್ಲಾ ರಾಜಕೀಯದಲ್ಲಿ ತರಹೇವಾರು ಚರ್ಚೆಗಳು ನಡೆದಿವೆ. ಸ್ವಪಕ್ಷಿಯರ ವಿರೋಧದ ಮಧ್ಯೆಯೇ ಆಪ್ತನನ್ನು ಬಿಜೆಪಿಗೆ ಕರೆತರುವಲ್ಲಿ ಬಿಜೆಪಿ ಉಪಾಧ್ಯಕ್ಷ ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ.
ಲಕ್ಷ್ಮಣ್ ಸವದಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಅರವಿಂದ ಪಾಟೀಲ್ ಬೆಳಗಾವಿ ಡಿಸಿಸಿ ಬ್ಯಾಂಕಿನ ಹಾಲಿ ನಿರ್ದೇಶಕರಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅರವಿಂದ ಪಾಟೀಲ್ ಬಿಜೆಪಿ ಸೇರಿದ್ದರು. ಅರವಿಂದ ಪಾಟೀಲ್ ಬಿಜೆಪಿ ಸೇರ್ಪಡೆಯಿಂದ ಖಾನಾಪುರ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಟಿಕೆಟ್ ಮೇಲೆ ಕಣ್ಣಿಟ್ಟು ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿದ್ದ ಬಿಜೆಪಿ ಸ್ಥಳೀಯ ನಾಯಕರು ಇದೀಗ ಶಾಕ್ ಗೆ ಒಳಗಾಗಿದ್ದಾರೆ.
ಖಾನಾಪುರ ಬಿಜೆಪಿ ಟಿಕೆಟ್ಗಾಗಿ ವಿಠ್ಠಲ್ ಹಲಗೇಕರ್ ಮತ್ತು ಡಾ.ಸೋನಾಲಿ ಸರ್ನೋಬತ್ಗೆ ಕಸರತ್ತು ನಡೆಸಿದ್ದರು. ಇದಕ್ಕಾಗಿ ನಿತ್ಯ ಕ್ಷೇತ್ರದಲ್ಲಿ ಸಂಚರಿಸಿ ಪಕ್ಷ ಸಂಘಟಿಸುತ್ತಿದ್ದಾರೆ. ಖಾನಾಪುರದಲ್ಲಿ ಭಿನ್ನಮತ ಶಮನಕ್ಕೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಎಂಟ್ರಿ ಕೊಟ್ಟಿದ್ದಾರೆ. ಖಾನಾಪುರ ಬಿಜೆಪಿ ನಾಯಕರ ಜೊತೆಗೆ ಮಹೇಶ್ ಟೆಂಗಿನಕಾಯಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಖಾನಾಪುರ ಬಿಜೆಪಿ ನಾಯಕರಿಗೆ ಸೂಚನೆ ನೀಡಿದ್ದಾರೆ. ಇದೆಲ್ಲದರ ಮಧ್ಯೆ ಅರವಿಂದ ಪಾಟೀಲ್ ಇಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಸ್ಥಳೀಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವಲ್ಲಿ ಅರವಿಂದ ಪಾಟೀಲ್ ಯಶಸ್ವಿಯಾಗ್ತಾರಾ ಎಂಬುದೇ ಸದ್ಯದ ಕುತೂಹಲ.
ಇದನ್ನೂ ಓದಿ: ಬಿಜೆಪಿ ತೆಕ್ಕೆಗೆ ಮಾಜಿ ಶಾಸಕ ಅರವಿಂದ ಪಾಟೀಲ್; ಎಂಇಎಸ್ ಗೆ ಬಿಗ್ ಶಾಕ್
ಮತ್ತೊಂದೆಡೆ ಎಂಇಎಸ್ ಬೆಳಗಾವಿಯಲ್ಲಿ ರಾಜಕೀಯ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ನಡೆದಿದ್ದ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಎಂಇಎಸ್ ಹೀನಾಯ ಸೋಲನುಭವಿಸಿತ್ತು. ಅರವಿಂದ ಪಾಟೀಲ ದಿಢೀರ್ ಬಿಜೆಪಿ ಸೇರ್ಪಡೆ ಎಂಇಎಸ್ ಶಾಕ್ ಗೆ ಒಳಗಾಗುವಂತೆ ಮಾಡಿದೆ. ಅರವಿಂದ ಪಾಟೀಲ್ ಬಿಜೆಪಿ ಸೇರ್ಪಡೆಯಿಂದ ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಅಂತ್ಯವಾಗಲಿದೆಯೇ ಎಂಬ ಬಗ್ಗೆಯೂ ಚರ್ಚೆಗಳು ಗರಿಗೆದರಿವೆ.