ಬೆಳಗಾವಿ: ನಗರದಲ್ಲಿ ಕ್ರೈಸ್ತ ಸಮಾಜಕ್ಕಾಗಿ ಐದು ಎಕರೆ ಸ್ಮಶಾನ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕ್ರೈಸ್ತ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.
ಈ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡ ಕ್ರೈಸ್ತ ಸಮುದಾಯದ ಮುಖಂಡರು, ನಗರದ ಪ್ರದೇಶಗಳಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದ್ದು, 30 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ನಗರದಲ್ಲಿದೆ. ಆದರೂ ಜಿಲ್ಲಾಡಳಿತ ಈವರೆಗೂ ಕ್ರೈಸ್ತ ಸಮಾಜಕ್ಕೆ ಜಿಲ್ಲೆಯಲ್ಲಿ ಪ್ರತ್ಯೇಕ ಸ್ಮಶಾನ ಭೂಮಿ ನೀಡುತ್ತಿಲ್ಲ. ಹೀಗಾಗಿ ಇಲ್ಲಿಯವರೆಗೆ ಮೆಥೋಡಿಸ್ಟ್ ಚರ್ಚ್ ಹಾಗೂ ಕೆಥೊಲಿಕ್ ಚರ್ಚಿನವರು ಶತಮಾನಗಳಿಂದ ಹೊಂದಿರುವ ಏಕೈಕ ಸ್ಥಳವನ್ನು ಬಳಸುತ್ತಿದ್ದೇವೆ ಎಂದರು.
ಸದ್ಯ ಸ್ಮಶಾನ ಜಾಗವಿಲ್ಲದೇ ಇರುವುದರಿಂದ ಹಳೇ ಸಮಾದಿಗಳನ್ನೇ ಅಗೆದು ಅದರಲ್ಲಿಯೇ ಹೊಸ ಮೃತ ಶವಪೆಟ್ಟಿಗೆಗಳನ್ನು ಹೂಳಲಾಗುತ್ತಿದೆ. ಇದರಿಂದಾಗಿ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ಕ್ರೈಸ್ತ ಸಮುದಾಯಕ್ಕಾಗಿಯೇ ಐದು ಎಕರೆ ಸ್ಮಶಾನ ಭೂಮಿ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.