ಬೆಳಗಾವಿ : ಕೊಲೆ ಪ್ರಕರಣವೊಂದರಲ್ಲಿ ಅಮಾಯಕರನ್ನ ಬಂಧಿಸಿ ₹15 ಲಕ್ಷ ಲಂಚ ಪಡೆದು ಕಿರುಕುಳ ನೀಡಿದ ಆರೋಪ ಗೋಕಾಕ್ ಪೊಲೀಸರು ವಿರುದ್ಧ ಕೇಳಿ ಬಂದಿದೆ. ಈ ಹಿನ್ನೆಲೆ ಸಮಗ್ರ ತನಿಖೆಗೆ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಆದೇಶ ನೀಡಿದ್ದಾರೆ.
![ಗೋಕಾಕ್ ಸಿಪಿಐ ಗೋಪಾಲ್ ರಾಠೋಡ್](https://etvbharatimages.akamaized.net/etvbharat/prod-images/15100838_659_15100838_1650777920938.png)
ಗೋಕಾಕ್ ಇನ್ಸ್ಪೆಕ್ಟರ್ ಗೋಪಾಲ್ ರಾಠೋಡ್, ಪಿಎಸ್ಐ ಹಾಗೂ ಸಿಬ್ಬಂದಿ ವಿರುದ್ಧ ಬೆಳಗಾವಿ ಜಿಲ್ಲೆ ಗೋಕಾಕ್ನ ಸಿದ್ದಪ್ಪ ಬಬಲಿ ಕುಟುಂಬಸ್ಥರು ಗಂಭೀರ ಆರೋಪಿ ಮಾಡಿದ್ದಾರೆ. ಇದಲ್ಲದೇ ನಿನ್ನೆ(ಶನಿವಾರ) ನ್ಯಾಯಕ್ಕಾಗಿ ನಗರದ ಡಿಸಿ ಕಚೇರಿಗೆ ಆಗಮಿಸಿ ವೃದ್ಧ ದಂಪತಿ, ಕುಟುಂಬಸ್ಥರು ಮಾಧ್ಯಮದವರು ಮುಂದೆ ಕಣ್ಣೀರು ಹಾಕಿದ್ದಾರೆ.
ಮತ್ತೊಂದೆಡೆ ಗೋಕಾಕ್ ಇನ್ಸ್ಪೆಕ್ಟರ್, ಸಿಬ್ಬಂದಿ ವಿರುದ್ಧ ಸಿದ್ದಪ್ಪ ಬಬಲಿ ಕುಟುಂಬಸ್ಥರು ಈಗಾಗಲೇ ನ್ಯಾಯಕ್ಕಾಗಿ ಸಿಎಂ, ಗೃಹಸಚಿವರು ಹಾಗೂ ಲೋಕಾಯುಕ್ತ, ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ : 2021ರ ಜುಲೈ 17ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ನ ಮಹಾಂತೇಶ ನಗರ ಬಡಾವಣೆಯಲ್ಲಿ ಮಂಜುನಾಥ ಮುರಕಿಭಾವಿ ಎಂಬುವರ ಕೊಲೆಯಾಗಿತ್ತು. ಕೊಲೆ ಪ್ರಕರಣದಲ್ಲಿ ಸಿದ್ದಪ್ಪ ಬಬಲಿ ಮಕ್ಕಳಾದ ಕೃಷ್ಣ,ಅರ್ಜುನ್ ಎಂಬುವರನ್ನು ಬಂಧಿಸಲಾಗಿತ್ತು. ಬಂಧಿತರ ಅಕ್ಕನ ಮಗಳನ್ನು ಕೊಲೆಯಾದ ಯುವಕ ಮಂಜುನಾಥ ಪ್ರೀತಿಸುತ್ತಿದ್ದ ಎಂಬ ಆರೋಪವಿದೆ. ಅಕ್ಕನ ಮಗಳ ಮದುವೆಯಾದ ಬಳಿಕವೂ ಮಂಜುನಾಥ ಸಂಪರ್ಕದಲ್ಲಿದ್ದ ಹಿನ್ನೆಲೆ ಆತನನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿತ್ತು.
![ದೂರು ಪ್ರತಿ](https://etvbharatimages.akamaized.net/etvbharat/prod-images/15100838_854_15100838_1650778217898.png)