ನವದೆಹಲಿ : ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ಉದ್ಯೋಗ ಕಡಿತಗಳು ಮುಂದುವರಿಯುತ್ತಿವೆ. ಈ ಮಧ್ಯೆ ಭಾರತದಲ್ಲಿ ಕನಿಷ್ಠ 82 ಸ್ಟಾರ್ಟ್ಅಪ್ಗಳಲ್ಲಿ 23,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಮತ್ತು ವಜಾಗೊಳಿಸುವಿಕೆಯ ಪ್ರಕ್ರಿಯೆ ಇನ್ನೂ ಮುಂದುವರೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವರದಿಯ ಪ್ರಕಾರ, ನಾಲ್ಕು ಯುನಿಕಾರ್ನ್ಗಳು ಸೇರಿದಂತೆ 19 ಶೈಕ್ಷಣಿಕ ವಲಯದ (edtech) ಸ್ಟಾರ್ಟ್ಅಪ್ಗಳು ಇಲ್ಲಿಯವರೆಗೆ 8,460 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿವೆ.
ಬೈಜುಸ್, ಓಲಾ, ಓಯೊ, ಮೀಶೊ, ಎಂಪಿಎಲ್, ಲಿವ್ ಸ್ಪೇಸ್, ಇನ್ನೋವಾಕ್ಸಿರ್, ಉಡಾನ್, ಅನಾಕಾಡೆಮಿ ಮತ್ತು ವೇದಾಂತು ಸೇರಿದಂತೆ ಹಲವಾರು ಸ್ಟಾರ್ಟಪ್ಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿವೆ. ಮನೆಯ ಒಳಾಂಗಣ ಮತ್ತು ನವೀಕರಣ ಸೇವೆಗಳನ್ನು ನೀಡುವ ಕಂಪನಿ ಲಿವ್ಸ್ಪೇಸ್ ಈ ವಾರ ವೆಚ್ಚ ಕಡಿತ ಕ್ರಮಗಳ ಭಾಗವಾಗಿ ಕನಿಷ್ಠ 100 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಆನ್ಲೈನ್ ಸ್ಟೋರ್ಗಳಿಗಾಗಿ SaaS ಪ್ಲಾಟ್ಫಾರ್ಮ್ ಆಗಿರುವ ದುಕಾನ್ ಸುಮಾರು 30 ಪ್ರತಿಶತದಷ್ಟು ಅಥವಾ ಸುಮಾರು 60 ಉದ್ಯೋಗಿಗಳನ್ನು ಕಳೆದ ವಾರ ವಜಾಗೊಳಿಸಿದೆ. ಕಳೆದ ಆರು ತಿಂಗಳಲ್ಲಿ ಇದು ಕಂಪನಿಯ ಎರಡನೇ ಹಂತದ ಉದ್ಯೋಗ ಕಡಿತವಾಗಿದೆ. ಹೆಲ್ತ್ಕೇರ್ ಯುನಿಕಾರ್ನ್ ಪ್ರಿಸ್ಟಿನ್ ಕೇರ್ ತನ್ನ ವಿವಿಧ ವಿಭಾಗಗಳಲ್ಲಿನ 350 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಂಪನಿಯ ಮಾರಾಟ, ತಂತ್ರಜ್ಞಾನ ಮತ್ತು ಉತ್ಪನ್ನ ತಂಡಗಳ ಉದ್ಯೋಗಿಗಳು ಇದರಿಂದ ಹೆಚ್ಚು ಬಾಧಿತರಾಗಿದ್ದಾರೆ.
ಆನ್ಲೈನ್ ಮೂಲಕ ಉನ್ನತ ಶಿಕ್ಷಣ ನೀಡುವ ಕಂಪನಿ ಅಪ್ಗ್ರಾಡ್ ತನ್ನ ಅಂಗಸಂಸ್ಥೆ ಕ್ಯಾಂಪಸ್ ನಲ್ಲಿ ಸುಮಾರು 30 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಫೆಬ್ರವರಿಯಲ್ಲಿ, ಎಂಡ್-ಟು-ಎಂಡ್ ಗ್ಲೋಬಲ್ ಡೆಲಿವರಿ ಮ್ಯಾನೇಜ್ಮೆಂಟ್ ಪ್ಲಾಟ್ಫಾರ್ಮ್ ಆಗಿರುವ FarEye 90 ಉದ್ಯೋಗಿಗಳನ್ನು ವಜಾಗೊಳಿಸಿದೆ. ಕಳೆದ ಎಂಟು ತಿಂಗಳಲ್ಲಿ ಇದು ಕಂಪನಿಯ ಎರಡನೇ ಹಂತದ ವಜಾ ಪ್ರಕ್ರಿಯೆಯಾಗಿದೆ.
ಜನವರಿ ಆರಂಭದಿಂದಲೇ ಹಲವಾರು ಭಾರತೀಯ ಸ್ಟಾರ್ಟ್ಅಪ್ ಕಂಪನಿಗಳು ವಿವಿಧ ವಿಭಾಗಗಳಲ್ಲಿನ ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಸಾಮಾಜಿಕ ಮಾಧ್ಯಮ ಕಂಪನಿ ಶೇರ್ಚಾಟ್ (ಮೊಹಲ್ಲಾ ಟೆಕ್ ಪ್ರೈವೇಟ್ ಲಿಮಿಟೆಡ್) ಅನಿಶ್ಚಿತ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ತನ್ನ ಶೇಕಡಾ 20 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರಿಂದ ಸುಮಾರು 500 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಸದ್ಯಕ್ಕೆ ಉದ್ಯೋಗ ಬದಲಾಯಿಸದಿರಲು ಟೆಕ್ಕಿಗಳ ನಿರ್ಧಾರ: ಆಕ್ಸೆಂಚರ್ ತನ್ನ 19,000 ಉದ್ಯೋಗಿಗಳನ್ನು ಅಥವಾ ಶೇಕಡಾ 2.5 ರಷ್ಟು ಉದ್ಯೋಗಿಗಳನ್ನು ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ ವಜಾಗೊಳಿಸಲಿದೆ. ಆಕ್ಸೆಂಚರ್ ಪ್ರಸ್ತುತ 7 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಭಾರತದಲ್ಲಿ ಮೂರು ಲಕ್ಷ ಜನ ಉದ್ಯೋಗಿಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಸ್ಟಾರ್ಟ್ಅಪ್ಗಳು ಮತ್ತು ಪ್ರಮುಖ ಟೆಕ್ ಸಂಸ್ಥೆಗಳಲ್ಲಿ ವಜಾಗೊಳಿಸುವಿಕೆಯನ್ನು ಗಮನಿಸುತ್ತಿರುವ ಹೆಚ್ಚಿನ ಉದ್ಯೋಗಿಗಳು ಸದ್ಯ ತಾವಿರುವ ಉದ್ಯೋಗಗಳನ್ನು ಬದಲಾಯಿಸಲು ಬಯಸುತ್ತಿಲ್ಲ. ಇತ್ತೀಚಿನ ತ್ರೈಮಾಸಿಕಗಳಲ್ಲಿ ಕಂಪನಿಗಳಲ್ಲಿ ಉದ್ಯೋಗಿಗಳ ವೆಚ್ಚಗಳು ಹೆಚ್ಚಾಗಿರುವುದರಿಂದ ಹಣಕಾಸು ವರ್ಷ 2024 ರಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವೇತನ ಹೆಚ್ಚಳ ಹಾಗೂ ಬಡ್ತಿ ನೀಡುವ ವಿಚಾರದಲ್ಲಿ ಅಷ್ಟೊಂದು ವಿಶಾಲ ಮನೋಭಾವನೆ ತೋರಲಿಕ್ಕಿಲ್ಲ ಎಂದು ಅಂದಾಜಿಸಲಾಗುತ್ತಿದೆ.
ಇದನ್ನೂ ಓದಿ : ಬೆಂಗಳೂರು ಕಂಪನಿಯಲ್ಲಿ ಉದ್ಯೋಗ ಕಳೆದುಕೊಂಡ ಇಂಜಿನಿಯರ್ ಟಿ ಅಂಗಡಿ ತೆರೆದು ಯಶಸ್ವಿ