ಹೈದರಾಬಾದ್: ನಲ್ಗೊಂಡ ಜಿಲ್ಲೆಯಲ್ಲಿ ಈ ಬಾರಿ ಹತ್ತಿ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, ಬೆಂಬಲ ಬೆಲೆಗಿಂತ 2 ಸಾವಿರ ರೂಪಾಯಿ ಹೆಚ್ಚು ನೀಡಲಾಗುತ್ತಿರುವುದು ಹತ್ತಿ ಬೆಳಗಾರರಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆಯನ್ನು ಹಲವರು ನೀಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹತ್ತಿಗೆ ಭಾರಿ ಬೇಡಿಕೆಯಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬಾರದಿರುವುದೇ ಹತ್ತಿ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಈ ವರ್ಷ ಇಳುವರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ರೈತರು ಎಕರೆಗೆ 10 ಕ್ವಿಂಟಾಲ್ ಹತ್ತಿ ಬೆಳೆಯುತ್ತಿದ್ದರು. ಆದರೆ ಈ ವರ್ಷ ಅದು 5 ಕ್ವಿಂಟಲ್ಗೆ ಇಳಿದಿದೆ. ಹತ್ತಿ ಬೆಂಬಲ ಬೆಲೆಯಾಗಿ 6,025 ರೂಪಾಯಿ ನೀಡಲಾಗುತ್ತಿದೆ. ವಾಸ್ತವವಾಗಿ ಸಿಸಿಐ ಖರೀದಿಸುವ ಸರಕುಗಳು ಶೇಕಡಾ 8 ರಿಂದ 12 ರಷ್ಟು ತೇವಾಂಶವನ್ನು ಹೊಂದಿರಬೇಕು. ಆದರೆ, ವರ್ತಕರು ಮತ್ತು ದಲ್ಲಾಳಿಗಳು ಶೇ.20 ತೇವಾಂಶವಿರುವ ಹತ್ತಿಗೆ 7,700 ರೂಪಾಯಿ ನೀಡಿದರೆ ಕೆಲವು ಗಿರಣಿಗಳು 7,900 ರೂಪಾಯಿ ಕೊಟ್ಟು ಖರೀದಿಸುತ್ತಿವೆ.
ಸೋಮವಾರ ಬೆಳಗ್ಗೆ 7,600 ರೂ. ಇದ್ದ ಬೆಲೆ ಸಂಜೆ 7,700 ರೂಪಾಯಿಗೆ ತಲುಪಿದೆ. ನಲ್ಗೊಂಡ ಜಿಲ್ಲೆಯ ಮುನುಗೋಡು ಕ್ಷೇತ್ರದ ಕೆಲವು ರೈತರಿಗೆ ಜಿನ್ನಿಂಗ್ ಮಿಲ್ಗಳು ಗರಿಷ್ಠ 7,900 ರೂ. ನೀಡಿವೆ. ಸದ್ಯದ ಬೆಲೆಯ ಟ್ರೆಂಡ್ ನೋಡಿದರೆ ಮುಂದಿನ ದಿನಗಳಲ್ಲಿ ಕ್ವಿಂಟಾಲ್ ಹತ್ತಿ 8 ಸಾವಿರ ದಾಟುವ ನಿರೀಕ್ಷೆ ಇದೆ. ನಲ್ಗೊಂಡ ಜಿಲ್ಲೆಯಲ್ಲಿ ತಿಂಗಳಿನಿಂದ ಹತ್ತಿ ಖರೀದಿ ಜೋರಾಗಿ ನಡೆಯುತ್ತಿದ್ದು, ಈವರೆಗೆ 2 ಲಕ್ಷ ಕ್ವಿಂಟಲ್ ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿರುವುದರಿಂದ ರೈತರು ಈಗ ಬೆಳೆದ ಬೆಳೆ ಮಾರಾಟ ಮಾಡಲು ಆಸಕ್ತಿ ತೋರುತ್ತಿಲ್ಲ. ಸದ್ಯ ಹತ್ತಿ ಎಲ್ಲೂ ಸಿಗದ ಕಾರಣ ಭಾರಿ ಬೇಡಿಕೆ ಬಂದಿದೆ ಎನ್ನುತ್ತಾರೆ ವ್ಯಾಪಾರಿಗಳು. ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಯಿಂದ ಬಹುತೇಕ ಹತ್ತಿ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಸದ್ಯ ಬೆಲೆ ಏರಿಕೆಯಾಗಿರುವುದರಿಂದ ರೈತರಿಗೆ ಕೊಂಚ ನೆಮ್ಮದಿ ಸಿಗುತ್ತಿದೆ.