ಜಿನೀವಾ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಲ್ಲಿ ಜೀವನೋಪಾಯ ಉಳಿಸುವುದು 'ಪೂರ್ವಾಪೇಕ್ಷಿತ' ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮುಖ್ಯಸ್ಥರು ಒತ್ತಾಯಿಸಿ, ಈ ಬಿಕ್ಕಟ್ಟನ್ನು ಮಾನವೀಯತೆಯ ಕರಾಳ ಸಮಯ ಎಂದು ನೋಡುವಂತೆ ಕರೆ ನೀಡಿದ್ದಾರೆ.
ಆರ್ಥಿಕ ಚಟುವಟಿಕೆ ಪುನರುಜ್ಜೀವನಗೊಳಿಸಲು ಕೋವಿಡ್-19 ವೈರಸ್ ಅನ್ನು ಮೊದಲು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ ಎಂದು ಡಬ್ಲ್ಯುಎಚ್ಒನ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹಾಗೂ ಐಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಹರಡುವಿಕೆ ತಡೆಯಲು ವಿಶ್ವದ ಅರ್ಧದಷ್ಟು ಜನಸಂಖ್ಯೆ ಒಂದು ರೀತಿಯಲ್ಲಿ ಮನೆಯಲ್ಲಿಯೇ ಇದ್ದಾರೆ. ವಿಶ್ವ ಆರ್ಥಿಕತೆಯು ವೈರಸ್ ಮತ್ತು ಅದಕ್ಕೆ ಸಂಬಂಧಿಸಿದ ಲಾಕ್ಡೌನ್ಗಳಿಂದ ಪ್ರಭಾವಿತವಾಗಿದೆ. ಕೋವಿಡ್-19 ಈಗಾಗಲೇ 50,000ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದೆ. ಒಂದು ಮಿಲಿಯನ್ಗಿಂತಲೂ ಹೆಚ್ಚು ಜನರು ವೈರಸ್ ಸೋಂಕಿತರಾಗಿದ್ದಾರೆ.
ಕೋವಿಡ್-19ಗೆ ಜಗತ್ತು ಪ್ರತಿಕ್ರಿಯಿಸುತ್ತಿದ್ದಂತೆ ರಾಷ್ಟ್ರ- ರಾಷ್ಟ್ರಗಳು ತನ್ನ ಸಮಾಜ ಮತ್ತು ಆರ್ಥಿಕತೆಯನ್ನು ಸ್ಥಗಿತಗೊಳಿಸಿ ವೈರಸ್ ಹರಡುವಿಕೆ ತಡೆಯಲು ಮುಂದಾಗಿವೆ ಎಂದು ಟೆಡ್ರೊಸ್ ಮತ್ತು ಜಾರ್ಜೀವಾ ಬ್ರಿಟಿಷ್ ಪತ್ರಿಕೆ ' ಡೈಲಿ ಟೆಲಿಗ್ರಾಫ್'ನಲ್ಲಿ ಜಂಟಿ ಲೇಖನ ಬರೆದಿದ್ದಾರೆ.
ಜೀವಗಳನ್ನು ಉಳಿಸಿ ಅಥವಾ ಜೀವನೋಪಾಯವನ್ನು ಉಳಿಸಿ. ವೈರಸ್ ಅನ್ನು ನಿಯಂತ್ರಣದಲ್ಲಿ ಇಡುವುದು ಯಾವುದಾದರೂ ಇದ್ದರೆ, ಜೀವನೋಪಾಯ ಉಳಿಸಲು ಪೂರ್ವಾಪೇಕ್ಷಿತವಾಗಿದೆ. ಹಲವಾರು ದೇಶಗಳು ಮುಖ್ಯವಾಗಿ ಬಡ ದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯು ಕೋವಿಡ್-19 ಸೋಂಕಿನ ದಾಳಿ ಎದುರಿಸಲು ಸಿದ್ಧವಾಗಿಲ್ಲ. ಆರೋಗ್ಯ ರಕ್ಷಣೆಗೆ ಖರ್ಚು ಮಾಡಲು ಆದ್ಯತೆ ನೀಡುವಂತೆ ದೇಶಗಳನ್ನು ಒತ್ತಾಯಿಸಿದರು..
ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಹಾದಿ ಮತ್ತು ಜಾಗತಿಕ ಭವಿಷ್ಯದ ಆರ್ಥಿಕತೆಯು ಬೇರ್ಪಡಿಸಲಾಗದಂತೆ ಹೆಣೆದುಕೊಂಡಿದೆ. ಆರ್ಥಿಕ ಪರಿಸ್ಥಿತಿಗಳು ಬಿಗಿಯಾಗುತ್ತಿರುವಾಗ ಸೋಂಕು ಮತ್ತು ಸಾಂಕ್ರಾಮಿಕ ನಿಯಂತ್ರಣ ಕ್ರಮಗಳು ಕಾರ್ಮಿಕರು, ಕಂಪನಿಗಳು ಮತ್ತು ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಆರ್ಥಿಕ ಚಟುವಟಿಕೆ ಕುಸಿಯುತ್ತಿದೆ ಎಂದು ಹೇಳಿದರು.