ನವದೆಹಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲೆ ವಾರ್ಷಿಕ ಬಡ್ಡಿದರ ಕಡಿತಗೊಳಿಸುವ ಆದೇಶ ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳು 2020-2021ರ ಕೊನೆಯ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ದರಗಳಲ್ಲೇ ಮುಂದುವರಿಯಲಿವೆ. ಅಂದರೆ, ಮಾರ್ಚ್ 2021ರ ಹೊತ್ತಿಗೆ ಇದ್ದ ದರಗಳೇ ಇರಲಿವೆ. ನಿನ್ನೆ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುತ್ತದೆ. ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ಸ್ಪಷ್ಟ ಪಡಿಸಿದ್ದಾರೆ.
ಸಣ್ಣ ಉಳಿತಾಯ ಯೋಜನೆಗಳಾದ ಪೋಸ್ಟ್ ಆಫೀಸ್ ಠೇವಣಿ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯ ಮೇಲಿನ ಬಡ್ಡಿದರಗಳನ್ನು 110 ಬೇಸಿಸ್ ಪಾಯಿಂಟ್ಗಳವರೆಗೆ ಕೇಂದ್ರ ಸರ್ಕಾರ ಕಡಿತಗೊಳಿಸಿತ್ತು, ಸುರಕ್ಷತೆ ಬಯಸುವ ಸೇವರ್ಗಳಿಗೆ ಹೊಸ ಹೊಡೆತ ನೀಡಿತ್ತು.
ರಾಷ್ಟ್ರೀಯ ಉಳಿತಾಯ ಪತ್ರ (ಎನ್ಎಸ್ಪಿ), ಸುಕನ್ಯಾ ಸಮೃದ್ಧಿ ಯೋಜನೆ, ನಿಗದಿತ ಠೇವಣಿ, ಪಿಪಿಎಫ್, ಉಳಿತಾಯ ಖಾತೆ ಸೇರಿದಂತೆ ಬಹುತೇಕ ಎಲ್ಲಾ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರ ಇಳಿಕೆ ಮಾಡಲಾಗಿತ್ತು. ಪರಿಷ್ಕೃತ ಬಡ್ಡಿ ದರಗಳು ಈ ವರ್ಷದ ಏಪ್ರಿಲ್ 1ರಿಂದ ಅನ್ವಯ ಆಗಲಿದ್ದು, ಏಪ್ರಿಲ್ ಜೂನ್ ತ್ರೈಮಾಸಿಕದಲ್ಲಿ ಜಾರಿಯಲ್ಲಿ ಇರಲಿವೆ ಎಂದು ಹೇಳಲಾಗಿತ್ತು.
ಸಾರ್ವಜನಿಕ ಭವಿಷ್ಯ ನಿಧಿಯ ಮೇಲಿನ ಬಡ್ಡಿದರವನ್ನು ಶೇ 6.4 ಕ್ಕೆ ಇಳಿಸಲಾಗಿತ್ತು. ಇದು 1974 ರ ನಂತರದ ಕನಿಷ್ಠ ಪ್ರಮಾಣವಾಗಿತ್ತು. 2016 ರಲ್ಲಿ ತ್ರೈಮಾಸಿಕ ಬಡ್ಡಿದರಗಳನ್ನು ಘೋಷಿಸುವಾಗ, ಸಣ್ಣ ಉಳಿತಾಯ ಯೋಜನೆಗಳ ದರಗಳನ್ನು ಸರ್ಕಾರದ ಬಾಂಡ್ ಇಳುವರಿಗೆ ಜೋಡಿಸಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಕಳೆದ ತಿಂಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಹಣದುಬ್ಬರ ಕಾಳಜಿಯ ಮೇಲೆ ಸತತ ನಾಲ್ಕನೇ ಬಾರಿಗೆ ಬಡ್ಡಿದರಗಳನ್ನು ಶೇಕಡಾ 4 ರಂತೆ ಸ್ಥಿರವಾಗಿರಿಸಿದೆ.