ಗೋರಖಪುರ್ (ಉತ್ತರ ಪ್ರದೇಶ): ಭಾರತ ತನ್ನ 300 ವರ್ಷಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಉತ್ತಮವಾದ ಆರ್ಥಿಕ ವಾತಾವರಣ ಹೊಂದಿದೆ. ಈ ಮೂಲಕ ನಮ್ಮಲ್ಲಿನ ಬಡತನವನ್ನು ಹೋಗಲಾಡಿಸಬಹುದು ಎಂಬ ವಿಶ್ವಾಸ ಮತ್ತು ಆಶಾವಾದ ಬೆಳೆಸಿದೆ ಎಂದು ಇನ್ಫೋಸಿಸ್ನ ಸಹ- ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಮದನ್ ಮೋಹನ್ ಮಾಳವಿಯಾ ತಂತ್ರಜ್ಞಾನ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದಲ್ಲಿ ಮಾತನಾಡಿದ ಮೂರ್ತಿ ಅವರು, ಕಳೆದ 300 ವರ್ಷಗಳಲ್ಲಿ ಮೊದಲ ಬಾರಿಗೆ, ನಮ್ಮಲ್ಲಿನ ಬಡತನವನ್ನು ನಿವಾರಿಸಬಲ್ಲೆವು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಉತ್ತಮವಾದ ಭವಿಷ್ಯವನ್ನು ಸೃಷ್ಟಿಸಿಕೊಳ್ಳಬಲ್ಲೆವು ಎಂಬ ವಿಶ್ವಾಸವನ್ನು ಹುಟ್ಟುಹಾಕುವಂತಹ ಆರ್ಥಿಕ ವಾತಾವರಣವನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ನಾವು ಕಷ್ಟಪಟ್ಟು ಪ್ರಯತ್ನಿಸಿದರೆ ಮಹಾತ್ಮ ಗಾಂಧಿಯವರು ಬಯಸಿದಂತೆ ಬಡ ಮಗುವಿನ ಕಣ್ಣೀರನ್ನು ಒರೆಸಬಹುದು. ನಮ್ಮ ರಾಷ್ಟ್ರಧ್ವಜ ನಮ್ಮನ್ನು ಸುಲಭವಾಗಿ ಸೆಳೆದು ಬಿಡುತ್ತದೆ. 'ಮೇರಾ ಭಾರತ್ ಮಹಾನ್', 'ಜೈ ಹೋ' ಎಂದು ಕೂಗುವುದು ಸುಲಭ, ಆದರೆ, ಮೌಲ್ಯಗಳನ್ನು ಅಭ್ಯಾಸ ಮಾಡಿ ರೂಢಿಸಿಕೊಳ್ಳುವುದು ಕಷ್ಟ. ದೇಶಪ್ರೇಮ ಎಂದರೆ ಪ್ರತಿಯೊಬ್ಬ ನಾಗರಿಕರಿಂದ ಉತ್ತಮವಾದದ್ದನ್ನು ಹೊರತರುವುದು. ದೇಶಪ್ರೇಮವು ದೇಶಕ್ಕಾಗಿ ಕೆಲಸ ಮಾಡುವುದನ್ನು ಸೂಚಿಸುತ್ತದೆ ಎಂದರು.