ನವದೆಹಲಿ: ಸಂಘಟಿತ ಹಾಗೂ ಅಸಂಘಟಿತ ವಲಯಗಳ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಒಂದು ರಾಷ್ಟ್ರ, ಒಂದೇ ದಿನ ವೇತನ ಪಾವತಿ ವ್ಯವಸ್ಥೆಯನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ತಿಳಿಸಿದ್ದಾರೆ.
ಖಾಸಗಿ ಭದ್ರತಾ ಕೈಗಾರಿಕೆಗಳ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸುವುದನ್ನು ಖಚಿತಪಡಿಸಲು ಮಾಸಿಕ ಸಂಬಳವನ್ನು ಪ್ಯಾನ್ ಇಂಡಿಯಾ ಮಾದರಿಯಲ್ಲಿ ಒಂದೇ ದಿನದಲ್ಲಿ ಪಾವತಿಸುವ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು. ಜೊತೆಗೆ ಕಾರ್ಮಿಕರ ಉತ್ತಮ ಜೀವನೋಪಾಯದ ಭರವಸೆಯ ಏಕರೂಪದ ಕನಿಷ್ಠ ವೇತನ ಕಾಯ್ದೆ ಅನುಷ್ಠಾನ ತರಲಾಗುವುದು ಎಂದರು.
ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಸ್ಥಿತಿ ಸಂಹಿತೆ ಹಾಗೂ ವೇತನ ಸಂಹಿತೆ ಜಾರಿಗಾಗಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ವೇತನ ಸಂಹಿತೆಯನ್ನು ಈಗಾಗಲೇ ಅಂಗೀಕರಿಸಲಾಗಿದೆ. ಇದರ ಅನುಷ್ಠಾನಕ್ಕೆ ನೀತಿ-ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದರು.
ಪ್ರಸ್ತುತ ಕಾರ್ಮಿಕರ ಸ್ಥಿತಿಗತಿ ಸುಧಾರಣೆಗೆ 44 ಸಂಕೀರ್ಣ ಕಾರ್ಮಿಕ ಕಾನೂನುಗಳನ್ನು ಕೈಗೆತ್ತಿಕೊಂಡಿದ್ದೇವೆ. ಕಾನೂನುಗಳ ಪರಿಣಾಮಕಾರಿ ಮತ್ತು ಉಪಯುಕ್ತವಾಗಿರಿಸಲು ಸಂಬಂಧಪಟ್ಟವರ ಜೊತೆಗೆ ಚರ್ಚಿಸುತ್ತಿದ್ದೇವೆ. ಎಲ್ಲ ವಿಧದ ವ್ಯವಹಾರವನ್ನು ಸುಲಭಗೊಳಿಸಲು 'ಏಕ ಪುಟ' (ಸಿಂಗಲ್ ಪೇಜ್) ಕಾರ್ಯವಿಧಾನ ಸಿದ್ಧಪಡಿಸುತ್ತಿದ್ದೇವೆ. ಯಾವುದೇ ರೀತಿಯ ಸಮಸ್ಯೆಗಳನ್ನು 48 ಗಂಟೆಯ ಒಳಗೆ ಪರಿಹರಿಸುವಂತಹ ಆನ್ಲೈನ್ ವ್ಯವಸ್ಥೆ ಜಾರಿಗೆ ತರಲಿದ್ದೇವೆ ಎಂದು ಗಂಗ್ವಾರ್ ತಿಳಿಸಿದ್ದಾರೆ.