ನವದೆಹಲಿ: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಪ್ರಸ್ತುತ ಬಡ್ಡಿದರ ಸನ್ನಿವೇಶ ಮತ್ತು ಹೆಚ್ಚುವರಿ ದ್ರವ್ಯತೆಯ ದೃಷ್ಟಿಯಿಂದ ಎಲ್ಲ ವಿಧದ ಮೆಚುರಿಟಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಕಡಿತಗೊಳಿಸಿದೆ.
ಪರಿಷ್ಕೃತ ನೂತನ ಬಡ್ಡಿದರವು 2019ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು ಎಸ್ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಚಿಲ್ಲರೆ ಅವಧಿಯ 2 ಕೋಟಿ ರೂ.ಗಿಂತ ಕಡಿಮೆ ಮತ್ತು ದೀರ್ಘಾವಧಿಯ 2 ಕೋಟಿ ರೂ.ಗಿಂತ ಅಧಿಕ ಠೇವಣಿಗಳ ಮೇಲಿನ ಬಡ್ಡಿದರ ಕಡಿತಗೊಳ್ಳಲಿದೆ. ಚಿಲ್ಲರೆ ಅವಧಿಯ ಠೇವಣಿ ಮೇಲೆ 20 ಬೇಸಸ್ ಪಾಯಿಂಟ್ಸ್ (ಬಿಪಿಎಸ್) ಹಾಗೂ ದೀರ್ಘಾವಧಿಯ ಠೇವಣಿ ಮೇಲೆ 35 ಬಿಪಿಎಸ್ ಕಡಿತಗೊಳಿಸಿದೆ. 175 ದಿನಗಳ ವರೆಗಿನ ಅಲ್ಪ ಅವಧಿಯ ಠೇವಣಿಗಳ ಮೇಲೆ 50- 75 ಬಿಪಿಎಸ್ ಇಳಿಸಲಾಗಿದೆ ಎಂದು ಎಸ್ಬಿಐ ಹೇಳಿದೆ.
ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರ ಕಡಿಮೆಗೊಳಿಸಿದ್ದರಿಂದ, ಸ್ಥಿರ ಆದಾಯ ಹೂಡಿಕೆದಾರರಿಗೂ ಕಹಿ ಸುದ್ದಿ ಆಗಿದೆ. ರಾಷ್ಟ್ರೀಯ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿಯೂ 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದೆ. ಇದು ಕಳೆದ ಜೂನ್ ತಿಂಗಳಲ್ಲಿ ಪ್ರಕಟಿಸಿತ್ತು.